ವಾಷಿಂಗ್ ಟನ್ : ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಕಲಹ ಉಂಟಾಗಿರುವ ಬಗ್ಗೆ ಅನಿವಾಸಿ ಭಾರತೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಿಕೊಳ್ಳುವಂತೆ ಆಪ್ ಪಕ್ಷಕ್ಕೆ ಸಲಹೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಮನವಿ ಮಾಡಿರುವ ಅನಿವಾಸಿ ಭಾರತೀಯರು, ಯುನೈಟೆಡ್ ಎಎಪಿ(#UnitedAAP) ಎಂಬ ಹ್ಯಾಶ್ ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಪಕ್ಷದ ನಾಯಕತ್ವದಲ್ಲಿ ಒಗ್ಗಟ್ಟನ್ನು ಸಾಧಿಸಬೇಕು ಮತ್ತು ಎಲ್ಲರೂ ಒಟ್ಟಾಗಿ ಮುಂದೆ ಸಾಗಬೇಕು ಹಾಗೂ ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂಬುದು ನಮ್ಮ ಮಹದಾಸೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯ ಸಾಧಿಸಿ ಭಾರತೀಯ ಆಡಳಿತದಲ್ಲಿ ಒಂದು ಹೊಸ ಅಧ್ಯಾಯ ಆರಂಭಿಸಿರುವ ಎಎಪಿಯ ಸಾಧನೆ ಬಗ್ಗೆ ನಾವೆಲ್ಲ ಅತ್ಯಂತ ಸಂತಸಗೊಂಡಿದ್ದೇವೆ ಆದರೆ, ಆಪ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳು ನಮಗೆ ತೀವ್ರ ನಿರಾಸೆ ಉಂಟುಮಾಡಿವೆ. ಕೇವಲ ಕೆಲವು ಕ್ಷುಲ್ಲಕ ಕಾರಣಗಳಿಗಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡಿ ನಮ್ಮಲ್ಲಿ ಭ್ರಮನಿರಸನ ಉಂಟು ಮಾಡುವುದು ಬೇಡ ಎಂದು ಜಾಗತಿಕ ಮಟ್ಟದಲ್ಲಿ ಆಪ್ ನ ಎನ್.ಆರ್.ಐ ಬೆಂಬಲಿಗರು ಮನವಿ ಮಾಡಿದ್ದಾರೆ.