ಮುಂಬೈ : ಭಾರತದಲ್ಲಿರುವ ಮುಸ್ಲಿಮ್ ಸಮುದಾಯಕ್ಕೆ ವಿಶೇಷ ಸ್ಥಾನಮಾನ ಬೇಕಾದರೆ ಅವರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ ಎಂದು ಶಿವಸೇನೆ ಹೇಳಿದೆ.
ಭಾರತದಿಂದ ಮುಸ್ಲಿಮರಿಗೇನಾದರೂ ಬೇಕಾದರೆ ಅವರು ಮೊದಲು ಭಾರತವನ್ನು ತಮ್ಮ ಮಾತೃಭೂಮಿ ಎಂದು ಒಪ್ಪಿಕೊಳ್ಳಲಿ ಅಂತೆಯೇ ವಂದೇ ಮಾತರಂ ನ ಒಪ್ಪಿಕೊಳ್ಳಲಿ, ಅವರು ತಮ್ಮ ಧರ್ಮಕ್ಕೆ ಮಾತ್ರ ಅಂಟಿಕೊಂಡಿರುವುದು ಸೂಕ್ತವಲ್ಲ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕೆಂದು ಮಾ.1ರಂದು ನಾಗ್ಪುರದಲ್ಲಿ ನಡೆದ ಎಐಎಂಐಎಂ ಪಕ್ಷದ ಮುಖಂಡ ಅಸಾವುದ್ದೀನ್ ಓವೈಸಿ ಸರ್ಕಾರವನ್ನು ಒತ್ತಾಯಿಸಿದ್ದರು.
ಓವೈಸಿಯ ಬೇಡಿಕೆಗೆ ಶಿವಸೇನೆ ಪ್ರತಿಕ್ರಿಯೆ ನೀಡಿದ್ದು, ಮೀಸಲಾತಿಯನ್ನು ನೀಡಲು ಸಾಮಾಜಿಕ ಮಾನದಂಡಗಳು ಮುಖ್ಯವಾಗುತ್ತವೆಯೇ ಹೊರತು, ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಬಡ ಮುಸ್ಲೀಮರಿಗೆ ಮಾತ್ರ ಮೀಸಲಾತಿ ನೀಡಬೇಕು. ಈ ತತ್ವವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡರೆ ಓಟ್ ಬ್ಯಾಂಕ್ ರಾಜಕಾರಣಕ್ಕೆ ಅವಕಾಶವಿರುವುದಿಲ್ಲ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ದೇಶದ ಮುಸ್ಲಿಮರು ಏಕರೂಪ ನಾಗರಿಕ ಸಂಹಿತೆಯನ್ನು ಹಾಗೂ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ 370ನೇ ವಿಧಿ ರದ್ದುಗೊಳಿಸುವುದನ್ನು ಒಪ್ಪಿಕೊಳ್ಳಬೇಕೆಂದು ಶಿವಸೇನೆ ಒತ್ತಾಯಿಸಿದೆ. ಭಾರತದಲ್ಲಿ ಮುಸ್ಲಿಮರು ಸಾಕಷ್ಟು ನೋವು ಅನುಭವಿಸಿದ್ದಾರೆ ಎಂದು ಹೇಳುವ ಓವೈಸಿ, ಮುಸ್ಲಿಮ್ ಮೂಲಭೂತವಾದಿತನ, ಭಯೋತ್ಪಾದನೆ ಹಾಗೂ ಬಾಂಬ್ ಸ್ಫೋಟಗಳಿಂದ ಅದೆಷ್ಟು ಜನ ಹಿಂದುಗಳು ನೋವು ಅನುಭವಿಸಿದ್ದಾರೆ ಎಂಬುದರ ಬಗ್ಗೆ ಯೋಚನೆ ಮಾಡಬೇಕೆಂದು ಶಿವಸೇನೆ ಹೇಳಿದೆ.