ಮುಂಬೈ : ಎಚ್1ಎನ್1 ಹಂದಿ ಜ್ವರ ರೋಗಿಗಳಿಗೆ ಸರಕಾರದ ಖರ್ಚಿನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಈ ನಡುವೆ ಮುಂಬಯಿಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಎಚ್1ಎನ್1 ಹಂದಿ ಜ್ವರವು ಇನ್ನಷ್ಟು ಹೆಚ್ಚುವ ಭೀತಿ ಮೂಡಿಸಿದೆ.
ರಾಜ್ಯಾದ್ಯಂತದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಎಚ್1ಎನ್1 ಹಂದಿ ಜ್ವರ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಮೂಲಕ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಬರುವ ಎಲ್ಲ ಖರ್ಚುಗಳನ್ನು ಸರಕಾರವೇ ಭರಿಸಲಿದೆ. ಖಾಸಗಿ ಆಸ್ಪತ್ರೆಗಳು ಹಂದಿ ಜ್ವರ ಕಾಯಿಲೆಯಿಂದ ಬಳಲುವವರಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳುವಂತಿಲ್ಲ . ಈ ಸಂಬಂಧ ತಗಲುವ ಎಲ್ಲ ಖರ್ಚುಗಳನ್ನು ಸರ್ಕಾರವೇ ಭರಿಸಲಿದೆ ಎಂದು ಫಡ್ನವೀಸ್ ತಿಳಿಸಿದ್ದಾರೆ.
ರಾಜ್ಯದಲ್ಲಿನ ಶೇ.90ರಷ್ಟು ಹಂದಿ ಜ್ವರ ರೋಗಿಗಳು ಮುಂಬಯಿ, ಪುಣೆ, ನಾಗಪುರ, ಔರಂಗಾಬಾದ್ ಮತ್ತು ಲಾತೂರ್ ನವರಾಗಿದ್ದಾರೆ. ಈ ಪ್ರದೇಶದಲ್ಲಿನ ದಿನದ ಉಷ್ಣಾಂಶ ಇದ್ದಕ್ಕಿಂದ್ದಂತೆಯೇ ಕುಸಿದಿದೆ ಮತ್ತು ಇದರಿಂದಾಗಿ ಈ ಪ್ರದೇಶಗಳಲ್ಲಿ ಹಂದಿ ಜ್ವರ ಸೋಂಕು ಇನ್ನಷ್ಟು ವ್ಯಾಪಿಸುವ ಭೀತಿ ಇದೆ. ರಾಜ್ಯದ ಆರೋಗ್ಯ ಇಲಾಖೆಯನ್ನು ಈ ನಿಟ್ಟಿನಲ್ಲಿ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ಖಾಸಗಿ ಸಹಿತ ಎಲ್ಲ ಆಸ್ಪತ್ರೆಗಳಲ್ಲಿ ಎಲ್ಲ ಹಂದಿಜ್ವರ ರೋಗಿಗಳಿಗೆ, ಸೋಂಕು ತಗಲಿದವರಿಗೆ, ಉಚಿತವಾಗಿ ಚಿಕಿತ್ಸೆ ನೀಡುವಂತೆ ಆದೇಶಿಸಲಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ.