ಚೆನ್ನೈ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಿಸಿಸಿಐ ಚುನಾವಣೆಯಲ್ಲಿ ಜಗಮೋಹನ್ ದಾಲ್ಮಿಯ ಬಿಸಿಸಿಐನ ಪೂರ್ಣಕಾಲಿಕ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಪದಚ್ಯುತ ಅಧ್ಯಕ್ಷ ಎನ್.ಶ್ರೀನಿವಾಸನ್ ಸ್ಪರ್ಧಿಸದೇ ಇದ್ದುದರಿಂದ ಅವರಪರ ದಾಲ್ಮಿಯ ನಾಮಪತ್ರ ಸಲ್ಲಿಸಿದ್ದರು.
ದಾಲ್ಮೀಯ ಅವರಿಗೆ ಎದುರಾಳಿಯಾಗಿ ಸ್ಪರ್ಧಿಸುವ ನಿರೀಕ್ಷೆ ಮೂಡಿಸಿದ್ದ ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಕಣದಿಂದ ಅನಿವಾರ್ಯವಾಗಿ ಹಿಂದೆ ಸರಿದಿದ್ದರು.
ಸ್ಪಾಟ್ ಫಿಕ್ಸಿಂಗ್ ಪ್ರಕರಣದಡಿ ವಿಚಾರಣೆಗೊಳಗಾದ ಎನ್.ಶ್ರೀನಿವಾಸನ್ ಸ್ಪರ್ಧೆ ಸಂಬಂಧ ದೀರ್ಘಕಾಲ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಸ್ವಹಿತಾಸಕ್ತಿ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಅನ್ಯಮಾರ್ಗವಿಲ್ಲದೇ ಶ್ರೀನಿವಾಸನ್ ಚುನಾವಣೆಯಿಂದ ದೂರವುಳಿದು ತಮ್ಮ ಪರ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ದಾಲ್ಮಿಯರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು.
74 ವರ್ಷದ ದಾಲ್ಮೀಯ ಈ ಹಿಂದೆ ಐಸಿಸಿ ಅಧ್ಯಕ್ಷಹುದ್ದೆಯನ್ನೂ ಅಲಂಕರಿಸಿದ್ದರು. ಚೆನ್ನೈನಲ್ಲಿ ನಡೆದ ಬಿಸಿಸಿಐ ಮಹಾಸಭೆಯಲ್ಲಿ ದಾಲ್ಮಿಯಾ ಅವರನ್ನು ಆಯ್ಕೆ ಮಾಡಲಾಗಿದ್ದು, ಅನಿರುದ್ಧ್ ಚೌದರಿ ಖಜಾಂಚಿಯಾಗಿ, ಕಾರ್ಯದರ್ಶಿಯಾಗಿ ಅನುರಾಗ್ ಠಾಕೂರ್ ಆಯ್ಕೆಯಾಗಿದ್ದಾರೆ.