ಚೆನ್ನೈ : ತೀರ್ವ ಕುತೂಹಲ ಕೆರಳಿಸಿರುವ ಬಿಸಿಸಿಐ ಚುನಾವಣೆ ಸೋಮವಾರ ನಡೆಯಲಿದ್ದು ಅಧ್ಯಕ್ಷರಾಗಿ ಜಗಮೋಹನ್ ದಾಲ್ಮಿಯಾ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಹುದ್ದೆ ಮೇಲೆ ಕಣ್ಣಿಟ್ಟು ಕೋರ್ಟ್ನಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಪದಚ್ಯುತ ಅಧ್ಯಕ್ಷ ಶ್ರೀನಿವಾಸನ್ ಕಣದಿಂದ ಹಿಂದೆ ಸರಿದು ದಾಲ್ಮಿಯಾರನ್ನು ಬೆಂಬಲಿಸಿದರು. ಹೀಗಾಗಿ ದಾಲ್ಮಿಯಾ ಭಾನುವಾರ ನಾಮಪತ್ರ ಸಲ್ಲಿಸಿದರು. ಇನ್ನೊಂದೆಡೆ ಶರದ್ ಪವಾರ್ ಕೂಡ ಹಿಂದೆ ಸರಿದಿರುವುದರಿಂದ ದಾಲ್ಮಿಯಾ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಅತ್ಯಂತ ಕುತೂಹಲ ಮೂಡಿಸಿರುವ ಬಿಸಿಸಿಐ ಚುನಾವಣೆ ಸೋಮವಾರ ನಡೆಯಲಿದೆ. ಸುಪ್ರೀಂ ಕೋರ್ಟ್ ನ ಸೂಚನೆ ಹಿನ್ನೆಲೆಯಲ್ಲಿ ಪದಚ್ಯುತ ಅಧ್ಯಕ್ಷ ಎನ್.ಶ್ರೀನಿವಾಸನ್ ಸ್ಪರ್ಧಿಸದೇ ಇರುವುದರಿಂದ ಅವರ ಪರ ಜಗಮೋಹನ್ ದಾಲ್ಮಿಯಾ ನಾಮಪತ್ರ ಸಲ್ಲಿಸಿದ್ದಾರೆ. ಎದುರಾಳಿಯಾಗಿ ಸ್ಪರ್ಧಿಸುವ ನಿರೀಕ್ಷೆ ಮೂಡಿಸಿದ್ದ ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಕಣದಿಂದ ಅನಿವಾರ್ಯವಾಗಿ ಹಿಂದೆ ಸರಿದಿರುವುದರಿಂದ ದಾಲ್ಮಿಯಾಗೆ ಎದುರಾಳಿಗಳೇ ಇಲ್ಲ. ಆದ್ದರಿಂದ ದಾಲ್ಮಿಯಾ ಬಿಸಿಸಿಐ ಅಧ್ಯಕ್ಷ ಎಂದು ಅಧಿಕೃತವಾಗಿ ಘೋಷಿಸುವುದಷ್ಟೇ ಈಗ ಬಾಕಿಯಿದೆ.
ಫೆ.8ರಂದು ನಡೆದ ಬಿಸಿಸಿಐ ಕಾರ್ಯಕಾರಿಣಿ ಸಭೆಯಲ್ಲಿ ಶ್ರೀನಿವಾಸನ್ ಭಾಗವಹಿಸಿರುವುದಕ್ಕೂ ನ್ಯಾಯಾಲಯ ತನ್ನ ಇತ್ತೀಚೆಗಿನ ವಿಚಾರಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆ ಕೋರಿದ ಶ್ರೀನಿವಾಸನ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡು ಕ್ರಿಕೆಟ್ ಸಂಸ್ಥೆ ಪರವಾಗಿ ಅವರು ಕೇವಲ ಮತದಾನವನ್ನಷ್ಟೇ ಮಾಡುವುದಕ್ಕೆ ನ್ಯಾಯಾಲಯ ಅವಕಾಶ ನೀಡಿದೆ.
ದಾಲ್ಮಿಯಾಗೆ ಎದುರಾಳಿಯಾಗಿ ಸ್ಪರ್ಧಿಸುವ ನಿರೀಕ್ಷೆ ಹುಟ್ಟಿಸಿದ್ದ ಶರದ್ ಪವಾರ್ ಸ್ಪರ್ಧೆಯಿಂದ ಹಿಂದೆ ಸರಿದರು. ಇದಕ್ಕೆ ಕಾರಣ ವಿಶೇಷವಾಗಿದೆ. ಪ್ರತಿಬಾರಿ ಬಿಸಿಸಿಐ ಆವರ್ತನ ಪದ್ಧತಿಯಂತೆ ಚುನಾವಣೆಗೆ ಅಭ್ಯರ್ಥಿಯನ್ನು ಶಿಫಾರಸು ಮಾಡಲು, ಅನುಮೋದಿಸಲು ಅವಕಾಶ ನೀಡುತ್ತದೆ. ಈ ಬಾರಿ ಪೂರ್ವವಲಯಕ್ಕೆ ಈ ಅವಕಾಶವಿದೆ. ಪೂರ್ವವಲಯದ ಆರೂ ಕ್ರಿಕೆಟ್ ಸಂಸ್ಥೆಗಳು ಶ್ರೀನಿವಾಸನ್ ಪರ ನಿಂತಿವೆ. ಆದ್ದರಿಂದ ಎನ್ಸಿಪಿ ಧುರೀಣ ಶರದ್ಗೆ ಶಿಫಾರಸು ಮಾಡುವವರೇ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ.
ಒಂದು ಕಾಲದಲ್ಲಿ ಬಿಸಿಸಿಐನ ಸಾಮ್ರಾಟನಾಗಿ ಮೆರೆದಿದ್ದ ಜಗಮೋಹನ್ ದಾಲ್ಮಿಯಾ, ಐಸಿಸಿ ಅಧ್ಯಕ್ಷರೂ ಆಗಿದ್ದರು. ಆದರೆ ಶರದ್ ಪವಾರ್ ಬಣ ಬಿಸಿಸಿಐ ಸ್ಥಾನಗಳಿಗೆ ಸ್ಪರ್ಧಿಸಿದ ನಂತರ ದಾಲ್ಮಿಯಾ ಅಧಿಕಾರ ಕಳೆದುಕೊಂಡಿದ್ದರು. 10 ವರ್ಷದಿಂದ ದಾಲ್ಮಿಯಾ ಕೇವಲ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದರು. ಈಗ ಮತ್ತೆ ಬಿಸಿಸಿಐ ಅಗ್ರಸ್ಥಾನಕ್ಕೇರುವ ಅವಕಾಶ ದಾಲ್ಮಿಯಾಗೆ ಲಭಿಸಿದೆ.