ನವದೆಹಲಿ : ಚಳಿಗಾಲ ಕಳೆದು, ಇನ್ನೂ ಬೇಸಿಗೆಯ ಬಿಸಲು ಆರಂಭವಾಗುತ್ತಿರುವ ಬೆನ್ನಲ್ಲೇ, ದೇಶದ ಹಲವು ಭಾಗಗಳಲ್ಲಿ ಭಾನುವಾರ ಮಳೆಯಾಗಿದೆ. ಜೊತೆಗೆ ಮುಂದಿನ 24 ಗಂಟೆಗಳಲ್ಲಿ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಕಾಲಿಕ ಮಳೆಯಿಂದಾಗಿ ಚಳಿ ಮತ್ತು ಬೇಸಿಗೆ ಮಿಶ್ರಿತ ವಾತಾವರಣ ಸೃಷ್ಟಿಯಾಗಿದ್ದು, ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ಪಶ್ಚಿಮ ಕರಾವಳಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಜಮ್ಮ-ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ವಾತಾವರಣದ ಮೇಲೆ ಪರಿಣಾಮ ಬೀರಿದೆ.
ಅಲ್ಲದೆ, ದೆಹಲಿ, ಪಂಜಾಬ್, ಹರ್ಯಾಣ, ಮಧ್ಯಪ್ರದೇಶದ ವಿದರ್ಭ ಮತ್ತು ಛತ್ತೀಸ್ ಗಢ, ರಾಜಸ್ಥಾನ ಮತ್ತು ಕರ್ನಾಟದದಲ್ಲೂ ಭಾರೀ ಮಳೆಯಾಗಿದೆ.
ರಾಜಸ್ಥಾನದ ಬಿಕಾನೇರ್ ನಲ್ಲಿ 21 ಮಿಲಿ ಮೀಟರ್, ಅಹಮದಾಬಾದ್ ನಲ್ಲಿ 19 ಮಿ.ಮೀ., ರಾಜಕೋಟ್ನಲ್ಲಿ 13 ಮಿ.ಮೀ., ಮುಂಬೈನಲ್ಲಿ 7 ಮಿ.ಮೀ., ಲಕ್ನೋದಲ್ಲಿ 7 ಮಿ.ಮೀ., ಗೋವಾದಲ್ಲಿ 30 ಮಿ.ಮೀ., ಕರ್ನಾಟಕದ ಬೆಳಗಾವಿಯಲ್ಲಿ 21 ಮಿ.ಮೀ., ಮಳೆ ಸುರಿದಿದೆ. ಕಛ ಮರುಭೂಮಿಯಲ್ಲೂ ಚದುರಿದಂತೆ ಮಳೆಯಾಗಿದೆ.
ಭಾರೀ ಹಿಮಪಾತದಿಂದಾಗಿ ಜಮ್ಮು-ಕಾಶ್ಮೀರದ ಹಲವು ಮಾರ್ಗಗಳು ಬಂದ್ ಆಗಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ. ಹಲವೆಡೆ ಭೂಕುಸಿತ ಉಂಟಾಗಿದ್ದು, ಜಮ್ಮು-ಶ್ರೀನಗರದ ನಡುವಿನ ಸಂಚಾರ ಸ್ಥಗಿತಗೊಂಡಿದೆ. ಉತ್ತರ ಪ್ರದೇಶದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ.