ಲಖ್ನೌ : ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎಲ್ಲಿದ್ದಾರೆಂಬ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಸ್ಥಳೀಯ ವಕೀಲರೊಬ್ಬರು ಅಲಹಾಬಾದ್ ಹೈಕೋರ್ಟ್ ನ ಲಖ್ನೋ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿಯ ಸುರಕ್ಷತೆಯ ದೃಷ್ಟಿಯಲ್ಲಿ ಇದು ಅಗತ್ಯವಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ, ಸಂಸದರಾಗಿರುವುದರಿಂದ ಭಾರತ ಸರ್ಕಾರದ ಜವಾಬ್ದಾರಿಯ ಪ್ರಶ್ನೆಯಾಗಿದೆ ಎಂದು ದೂರುದಾರ ವಕೀಲ ಅಶೋಕ್ ಪಾಂಡೆ ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಎಸ್ ಪಿಜಿ(ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್) ರಕ್ಷಣೆ ಇದೆ. ಹಾಗಾಗಿ ನಿಖರ ಮಾಹಿತಿ ನೀಡದೆ ಕಣ್ಮರೆಯಾಗಲು ಆಗುವುದಿಲ್ಲ. ಆ ನಿಟ್ಟಿನಲ್ಲಿ ಘನ ನ್ಯಾಯಾಲಯಕ್ಕೆ ನಾನು ಪ್ರಾರ್ಥಿಸಿಕೊಳ್ಳುವುದೇನೆಂದರೆ, ಕಾರ್ಯದರ್ಶಿ, ಗೃಹ ಸಚಿವಾಲಯ ಮತ್ತು ಎಸ್ ಪಿಜಿಯ ಮಹಾನಿರ್ದೇಶಕರ ಮೂಲಕ ರಾಹುಲ್ ಗಾಂಧಿ ಎಲ್ಲಿದ್ದಾರೆಂದು ಶೋಧ ನಡೆಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸೋಲಿಗಾಗಿ ಆತ್ಮಾವಲೋಕನ ನಡೆಸಲು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಎರಡು ವಾರಗಳ ಕಾಲ ರಜೆಯಲ್ಲಿ ತೆರಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿತ್ತು. ಆದರೆ ರಾಹುಲ್ ಗಾಂಧಿ ಎಲ್ಲಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ.