ಭೋಪಾಲ್ : ಮುಖ್ಯಮಂತ್ರಿ ಕಚೇರಿ ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ನೇಮಕಾತಿ ಮಾಡಿದ ಆರೋಪದ ಹಿನ್ನಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ವಿರುದ್ಧ ಮಧ್ಯಪ್ರದೇಶದಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಕೆಲ ದಿನಗಳ ಹಿಂದೆ ವೃತ್ತಿಪರ ಪರೀಕ್ಷಾ ಮಂಡಳಿ ನೇಮಕಾತಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರ ದುರುಪಯೋಗಪಡಿಸಿಕೊಂಡು ನೇಮಕ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ದಿಗ್ವಿಜಯಸಿಂಗ್ ಒತ್ತಾಯಿಸಿದರು. ಈ ಬೆಳವಣಿಗೆಗಳ ನಡುವೆಯೇ ಆಡಳಿತರೂಢ ಬಿಜೆಪಿ ಸರ್ಕಾರ ದಿಗ್ವಿಜಯಸಿಂಗ್, ಮಾಜಿ ವಿಧಾನಸಭೆಯ ಸ್ಪೀಕರ್ ಶ್ರೀನಿವಾಸ್ ತ್ರಿವೇದಿ ಸೇರಿದಂತೆ ಮತ್ತಿತರ ವಿರುದ್ಧ ಎಫ್.ಐ.ಆರ್ ದಾಖಲಿಸಿದೆ.
1993 ಮತ್ತು 2003ರ ಅವಧಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ತಮ್ಮ ಕಚೇರಿ ದುರುಪಯೋಗಪಡಿಸಿಕೊಂಡು 17 ಮಂದಿಯನ್ನು ಸಚಿವಾಲಯಕ್ಕೆ ನೇಮಕ ಮಾಡಿಕೊಂಡಿದ್ದಾರೆಂಬ ಆರೋಪ ದಿಗ್ವಿಜಯ್ ಸಿಂಗ್ ವಿರುದ್ಧ ಕೇಳಿಬಂದಿದೆ. ಅರ್ಹರನ್ನು ಕೈ ಬಿಟ್ಟು ಅನರ್ಹರನ್ನು ನೇಮಕ ಮಾಡಿಕೊಂಡಿದ್ದಾರೆಂಬುದು ಅವರ ಮೇಲಿನ ಆರೋಪ. ಇದರ ಬಗ್ಗೆ ಹಾಲಿ ನ್ಯಾಯಮೂರ್ತಿ ಸಚಿನ್ ದ್ವಿವೇದಿ ಅವರು ತನಿಖೆ ನಡೆಸಿ ವರದಿ ನೀಡಿದ್ದರು. ಸರ್ಕಾರಕ್ಕೆ ಸಲ್ಲಿಸಿರುವ 14 ಪುಟಗಳ ವರದಿಯಲ್ಲಿ ದಿಗ್ವಿಜಯಸಿಂಗ್, ಶ್ರೀನಿವಾಸ್ ತಿವಾರಿ ಸೇರಿದಂತೆ ಮತ್ತಿತರ ವಿರುದ್ಧ ದೂರು ದಾಖಲಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ನೇಮಕ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ನ್ಯಾಯಮೂರ್ತಿ ಸಚಿನ್ ದ್ವಿವೇದಿ ವರದಿಯ ಜತೆಗೆ ಮಧ್ಯಪ್ರದೇಶದ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಭಗವಾನ್ ದೇವ್ ಇಸ್ರಾನಿ ಕೂಡ ತನಿಖೆ ನಡೆಸಿದ್ದರು. ಮುಖ್ಯಮಂತ್ರಿ ಕಚೇರಿಯನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ದಿಗ್ವಿಜಯಸಿಂಗ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದೆ.