ನವದೆಹಲಿ : ಯಾವುದೋ ಧರ್ಮಕ್ಕೆ ಮತಾಂತರ ಹೊಂದಿದ ವ್ಯಕ್ತಿಯು ಮತ್ತೆ ತನ್ನ ಮಾತೃ ಧರ್ಮಕ್ಕೆ ಮರಳಿದಾಗ, ಮೂಲ ಪೂರ್ವಜರು ಯಾವ ಜಾತಿಯವರಾಗಿರುತ್ತಾರೋ ಅದೇ ಜಾತಿಯು ಆತನಿಗೆ ಅನ್ವಯವಾಗುತ್ತದೆ ಎಂಬ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೇರಳದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ.ದೀಪಕ್ ಮಿಶ್ರ ಮತ್ತು ನ್ಯಾ.ಗೋಪಾಲ ಗೌಡ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಹಿಂದು ಧರ್ಮಕ್ಕೆ ಮರುಮತಾಂತರಗೊಂಡ ವ್ಯಕ್ತಿಗೆ ಅವನ ಪೂರ್ವಜರ ಪರಿಶಿಷ್ಟ ಜಾತಿಯ ಸ್ಥಾನಮಾನ ಕೊಡಬೇಕು. ಅಲ್ಲದೆ, ಮೀಸಲಾತಿ ಅಡಿಯಲ್ಲಿ ನೌಕರಿ ಕೊಡಬೇಕೆಂದು ನ್ಯಾಯಪೀಠವು ಕೇರಳ ಸರ್ಕಾರಕ್ಕೆ ಆದೇಶಿಸಿದೆ.
ಮರು ಮತಾಂತರಗೊಂಡ ವ್ಯಕ್ತಿ ಸಂವಿಧಾನದ ನಿಯಮಗಳಡಿ ಪರಿಶಿಷ್ಟ ಜಾತಿಗೆ ಸೇರಿದವನೆಂದು ಖಚಿತ ಸಾಕ್ಷಿಗಳಿದ್ದರೆ, ಹೆತ್ತವರು ಅಥವ ಪೂರ್ವಜರು ಅನುಸರಿಸಿದ್ದ ಧರ್ಮಕ್ಕೆ ಮರಳಿ ಬಂದಿದ್ದರೆ ಮತ್ತು ಮರಳಿ ಬಂದ ಸಮುದಾಯ ಅವನನ್ನು ಅಂಗೀಕರಿಸಿದ್ದರೆ ಅವನ ನೌಕರಿಯನ್ನು ಕಿತ್ತುಕೊಳ್ಳಬಾರದು ಎಂದು ತೀರ್ಪಿನಲ್ಲಿ ಹೇಳಿದೆ.
ಕೇರಳದರವರಾದ ಕೆ.ಪಿ.ಮನು, 24 ವರ್ಷದವರಿದ್ದಾಗ ಕ್ರೈಸ್ತ ಧರ್ಮದಿಂದ ಹಿಂದು ಧರ್ಮಕ್ಕೆ ಈಗ ಮರು ಮತಾಂತರಗೊಂಡಿದ್ದರು. ಇವರ ಅಜ್ಜ ಹಿಂದು ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಕಾರಣ ಮನು ಕ್ರೈಸ್ತ ದಂಪತಿಗೆ ಜನಿಸಿದ್ದರು. ಮನುವನ್ನು ಹಿಂದು ಧರ್ಮಕ್ಕೆ ಸೇರ್ಪಡೆಗೊಳಿಸಿದ ಬಳಿಕ ಅವರ ಮೂಲಜಾತಿಯಾದ ಹಿಂದು ಪುಲಯದ (ಒಂದು ಪರಿಶಿಷ್ಟ ಜಾತಿ) ಪ್ರಮಾಣಪತ್ರ ನೀಡಲಾಗಿತ್ತು.
ಆದರೆ ಇದಕ್ಕೆ ಕೆಲವರು ಆಕ್ಷೇಪಣೆ ಸಲ್ಲಿಸಿದ್ದರು. ಆಗ ಪರಿಶೀಲನಾ ಸಮಿತಿಯು ಮನು ಕ್ರೈಸ್ತ ಧರ್ಮದಲ್ಲಿ ಜನಿಸಿರುವುದರಿಂದ ಮತ್ತು ಕ್ರೈಸ್ತ ಹೆಣ್ಣನ್ನು ಮದುವೆಯಾಗಿರುವುದರಿಂದ ಅವರನ್ನು ಹಿಂದು ಪರಿಶಿಷ್ಟ ಜಾತಿಯ ವ್ಯಕ್ತಿ ಎಂದು ಪರಿಗಣಿಸುವುದು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ವರದಿಯ ಆಧಾರದಲ್ಲಿ ಸರ್ಕಾರ ಅವರಿಗೆ ಮೀಸಲಾತಿಯಡಿಯಲ್ಲಿ ನೀಡಿದ್ದ ನೌಕರಿಯನ್ನು ಕಿತ್ತುಕೊಂಡದ್ದು ಮಾತ್ರವಲ್ಲದೆ ಅಷ್ಟು ವರ್ಷ ನೀಡಿದ 15 ಲಕ್ಷ ರೂ. ಸಂಬಳವನ್ನು ವಾಪಸು ಮಾಡಲು ಆದೇಶಿಸಿತ್ತು.
ಈ ಆದೇಶವನ್ನು ಪ್ರತಿಭಟಿಸಿ ಮನು ಕಾನೂನು ಹೋರಾಟ ಪ್ರಾರಂಭಿಸಿದಾಗ ಕೇರಳ ಹೈಕೋರ್ಟ್ ಕೂಡ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು. ಕೊನೆಗೆ ಸುಪ್ರೀಂ ಕೋರ್ಟಿನಲ್ಲಿ ಮನುವಿಗೆ ಜಯವಾಗಿದೆ.
ಪುಲಯ ಜಾತಿಯನ್ನು ಸರ್ಕಾರ ಮಾನ್ಯ ಮಾಡಿರುವುದರಿಂದ ಆ ಜಾತಿ ಸಂಘಟನೆ ನೀಡಿದ ಪ್ರಮಾಣ ಪತ್ರ ಊರ್ಜಿತವಾಗುತ್ತದೆ. ಹೀಗಾಗಿ ಮನು ಹಿಂದು ಅಲ್ಲ ಎಂಬ ವಾದ ಸರಿಯಲ್ಲ' ಎಂದು ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.