ನವದೆಹಲಿ : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ, ತನ್ನ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಸಜ್ಜಾಗಿದೆ. ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎನ್.ಡಿ.ಎ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಲಿದ್ದು, ಇದರಲ್ಲಿ ಜನಸಾಮಾನ್ಯರ ಓಲೈಕೆಯ ಜೊತೆಗೆ ದೇಶವನ್ನು ಹೂಡಿಕೆದಾರರ ಸ್ವರ್ಗವನ್ನಾಗಿಸುವ ಹಲವು ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.
ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ಕೇವಲ ಘೋಷಣೆ ಮಾಡುವುದರಲ್ಲೇ ನಿರತವಾಗಿದೆ. ಘೋಷಣೆಯ ಲಾಭ ನೇರವಾಗಿ ಜನರಿಗೆ ತಲುಪಿಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಜನಸಾಮಾನ್ಯರಿಗೆ ನೇರವಾಗಿ ಲಾಭ ತರುವಂತ ಹಲವು ನಿರ್ಧಾರಗಳನ್ನು ಸಚಿವ ಜೇಟ್ಲಿ ಪ್ರಕಟಿಸುವ ಸಾಧ್ಯತೆ ಇದೆ.
ಇಂಥ ಓಲೈಕೆ ಕ್ರಮಗಳ ಜೊತೆಗೆ ವಿತ್ತೀಯ ಕೊರತೆ ಕಡಿಮೆ ಮಾಡುವ, ಆರ್ಥಿಕತೆಗೆ ಚೇತರಿಕೆ ನೀಡುವ, ಉದ್ಯಮ ವಲಯಕ್ಕೆ ಟಾನಿಕ್ ನೀಡುವ ಸಂಕಷ್ಟದ ಸ್ಥಿತಿಯಲ್ಲಿ ಸಚಿವ ಜೇಟ್ಲಿ ಇದ್ದಾರೆ.
ಮುಖ್ಯವಾಗಿ, ಆರ್ಥಿಕ ಸುಧಾರಣೆಯ ಹಾದಿಯಲ್ಲಿ ತೆರಿಗೆ ಪದ್ಧತಿ, ಸಬ್ಸಿಡಿ ನೀತಿಯಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಚಿಂತಿಸಿದ್ದ ಬಿಜೆಪಿಗೆ ದೆಹಲಿ ವಿಧಾನಸಭಾ ಚುನಾವಣೆ ಯಸೋಲು ಶಾಕ್ ನೀಡಿದೆ. ಹೀಗಾಗಿ ಮಧ್ಯಮ ವರ್ಗದವರು ಮತ್ತು ಬಡವರ ಕಡೆಗೆ ಕನಿಷ್ಠ ಚಿತ್ತ ಹಾಯಿಸುವ ಸ್ಥಿತಿಯಲ್ಲಿ ಪಕ್ಷವಿಲ್ಲ. ಅದೀಗ ಅನಿವಾರ್ಯವಾಗಿ ಮತ್ತೂಂದು ಸುತ್ತಿನಲ್ಲಿ ಮಧ್ಯಮ ವರ್ಗದವರನ್ನು ಓಲೈಕೆ ಮಾಡಲೇಬೇಕಿದೆ. ಕಾರಣ, ವರ್ಷಾಂತ್ಯಕ್ಕೆ ಬಿಹಾರದಲ್ಲಿ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಇತರೆ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಪರಿಣಾಮ ಬಜೆಟ್ ಕೇವಲ ಹಣಕಾಸಿನ ಲೆಕ್ಕಾಚಾರವನ್ನು ಮಾತ್ರವಲ್ಲದೇ, ರಾಜಕೀಯ ಲೆಕ್ಕಾಚಾರವನ್ನು ಒಳಗೊಂಡಿರುವುದು ಸ್ಪಷ್ಟ.
ಕಳೆದ ಮಧ್ಯಂತರ ಬಜೆಟ್ನಲ್ಲಿ ಸಚಿವ ಜೇಟ್ಲಿ, ಆದಾಯ ತೆರಿಗೆ ಮಿತಿ ಮತ್ತು ಉಳಿತಾಯದ ಮೇಲಿನ ತೆರಿಗೆ ವಿನಾಯಿತಿ ಎರಡಲ್ಲೂ ಬದಲಾವಣೆ ಮಾಡಿ, ಜನಸಾಮಾನ್ಯರನ್ನು ಮೆಚ್ಚಿಸಿದ್ದರು. ಆದರೆ ಈ ಬಾರಿ ಆದಾಯ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ, ಮೇಲ್ಕಂಡ ಎರಡು ವಿಷಯಗಳ ಪೈಕಿ ಒಂದಕ್ಕೆ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯತೆ ಇದೆ.
ಹಾಲಿ ಜಿಡಿಪಿಯ ಶೇ.4.1ರಷ್ಟಿರುವ ವಿತ್ತೀಯ ಕೊರತೆಯನ್ನು ಶೇ.3.6ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಇದಕ್ಕಾಗಿ ಸಬ್ಸಿಡಿ ಹೊರೆ ತಪ್ಪಿಸಿಕೊಳ್ಳುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಇಂಥ ವಿತ್ತೀಯ ಶಿಸ್ತು ಸಾಧ್ಯವಾಗದೇ ಹೋದಲ್ಲಿ, ಮುಂಬರುವ ವರ್ಷಗಳಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಕ್ಕಿಬೀಳುವ ಸಾಧ್ಯತೆ ಇದೆ. ಆದರೆ ಇಂಥ ಶಿಸ್ತಿನ ಕ್ರಮಗಳು ಜನಪ್ರಿಯ ಯೋಜನೆಗಳಿಗೆ ನೀಡುವ ಅನುದಾನದ ಕಡಿತಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ.