ನವದೆಹಲಿ : ಯೋಜನೆಗಳ ಹೆಸರನ್ನು ಬದಲಾಯಿಸುವುದು ನಮ್ಮ ಗುರಿಯಲ್ಲ ಅಲ್ಲ, ಜನರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎನ್.ಡಿ.ಎ ಸರಕಾರ ಹಳೆಯ ಯೋಜನೆಗಳ ಹೆಸರುಗಳನ್ನು ಬದಲಾಯಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ಕಾಂಗ್ರೆಸ್ ವೈಫಲ್ಯಕ್ಕೆ ಕೆಲವು ಹಳೆಯ ಯೋಜನೆಗಳೇ ಜ್ವಲಂತ ನಿದರ್ಶನವಾಗಿದೆ. ಆದಾಗ್ಯೂ ಯೋಜನೆಗಳ ಹೆಸರುಗಳನ್ನು ಬದಲಾಯಿಸುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಯೋಜನೆಯ ಹೆಸರನ್ನು ಬದಲಾಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಮೋದಿ, ಈ ಯೋಜನೆ ಕಾಂಗ್ರೆಸ್ ವೈಫಲ್ಯದ ಜ್ವಲಂತ ನಿದರ್ಶನವಾಗಿದೆ. ತಮ್ಮ ಸರ್ಕಾರ ಹಿಂದಿನ ಸರಕಾರದ ಬಳುವಳಿಯಾಗಿ ಪಡೆದಿರುವ ಕೆಲವೊಂದು ಹಳೆಯ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದೆ. ಅದರಲ್ಲಿ ನರೇಗಾ ಸಹ ಒಂದಾಗಿದ್ದು ಅದರಲ್ಲಿರುವ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಹೇಳಿದರು.
ಯೋಜನೆಗಳ ಹೆಸರನ್ನು ಬದಲಾಯಿಸುವುದರಿಂದ ಏನೂ ಆಗುವುದಿಲ್ಲ. ಅದರ ಬದಲು ಅಭಿವೃದ್ಧಿ ಸಾಧಿಸಲು ಯತ್ನಿಸುವುದು ಮಾತ್ರವೇ ನಮ್ಮೆದುರಿನ ಸವಾಲಾಗಿದೆ ಎಂದು ಹೇಳಿದ್ದಾರೆ. ನಾವು ಯೋಜನೆಗಳ ಹೆಸರಿಗಿಂತಲೂ ಮಿಗಿಲಾದ ಎತ್ತರಕ್ಕೆ ಏರಬೇಕಾಗಿದೆ ಮತ್ತು ಆ ಮೂಲಕ ಆ ಯೋಜನೆಗಳಲ್ಲಿರುವ ಸಮಸ್ಯೆಗಳನ್ನು, ತೊಡಕುಗಳನ್ನು ಬಗೆಹರಿಸಬೇಕಾಗಿದೆ ಮತ್ತು ಆ ಮೂಲಕ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ ಎಂದವರು ಹೇಳಿದರು.
ತಮ್ಮ ಸರ್ಕಾರ ಮಂಡಿಸಿರುವ ಭೂಸ್ವಾಧೀನ ಮಸೂದೆಯಲ್ಲಿ ರೈತವಿರೋಧಿಯಾಗಿರುವ ಒಂದೇ ಒಂದು ಅಂಶವಿದ್ದರೆ ಅದನ್ನು ತೋರಿಸಿ, ಸರಿಪಡಿಸುತ್ತೇವೆ ಎಂದು ಭೂಸ್ವಾಧೀನ ಮಸೂದೆ ಬಗ್ಗೆ ತಕರಾರು ತೆಗೆದಿರುವ ವಿಪಕ್ಷಗಳಿಗೆ ಮೋದಿ ಸವಾಲು ಹಾಕಿದ್ದಾರೆ.
ಸರ್ಕಾರಗಳು ಬರುತ್ತವೆ, ಹೋಗುತ್ತವೆ. ರಾಷ್ಟ್ರವನ್ನು ಜನರೇ ನಿರ್ಮಿಸುತ್ತಾರೆ ಹೊರತು ಸರ್ಕಾರ ನಿರ್ಮಿಸುವುದಿಲ್ಲ. ಅದು ಜನತೆಯ ಶಕ್ತಿ, ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ದೇಶ ಅಭಿವೃದ್ಧಿಯಾಗಬೇಕಾದರೆ, ರಾಜ್ಯಗಳು ಅಭಿವೃದ್ಧಿಯಾಗಬೇಕು, ಆದ್ದರಿಂದ ತಮ್ಮ ಸರ್ಕಾರ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.