ನವದೆಹಲಿ : 'ಹಣಕಾಸು ಬಜೆಟ್' ಗೂ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಪೂರ್ವಭಾವಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಸಮೀಕ್ಷೆ ಪ್ರಕಾರ 2015-16ನೇ ಸಾಲಿನಲ್ಲಿ ಶೇ.8ಕ್ಕಿಂತ ಹೆಚ್ಚು ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ತಿಳಿಸಿದ್ದಾರೆ.
ಹಣದುಬ್ಬರ ದರ ಇಳಿಕೆಯಾಗುತ್ತಿರುವುದರಿಂದ ಆರ್ಥಿಕ ಬೆಳವಣಿಗೆ ಎರಡು ಅಂಕಿದಾಟುವ ಸಾಧ್ಯತೆಗಳನ್ನು ಆರ್ಥಿಕ ಸಮೀಕ್ಷೆ ತಳ್ಳಿಹಾಕಿಲ್ಲ. ಹಣದುಬ್ಬರದ ಬಗ್ಗೆಯೂ ಮಾಹಿತಿ ನೀಡಿರುವ ಆರ್ಥಿಕ ಸಮೀಕ್ಷೆ 2013ರಿಂದ ಹಣದುಬ್ಬರ ಪ್ರಮಾಣ ಶೇ.6ರಷ್ಟು ಇಳಿಕೆಯಾಗಿದೆ ಎಂದು ಹೇಳಿದೆ.
2014-15ನೇ ಸಾಲಿನಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯೂ ಏರಿಕೆಯಾಗಿದ್ದು, 257.07 ಮಿಲಿಯನ್ ಟನ್ ಗಳಷ್ಟಾಗಿರುವುದು ಸರ್ವೇ ಮೂಲಕ ತಿಳಿದುಬಂದಿದೆ. ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಸಾರ್ವಜನಿಕ ಹೂಡಿಕೆಯ ಅಗತ್ಯವೂ ಇದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಫೆ.28ರಂದು ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಪೂರ್ಣಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ, ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ.