ನವದೆಹಲಿ : ಆರ್ಥಿಕ ಸಂಕಷ್ಟದಲ್ಲಿರುವ ರೈಲ್ವೆಯನ್ನು ಲಾಭದ ಹಳಿಗೆ ತರಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಪರಿಪೂರ್ಣ ರೈಲ್ವೆ ಬಜೆಟ್ ಮಧ್ಯಾಹ್ನ 12ಕ್ಕೆ ಮಂಡನೆಯಾಗಲಿದೆ.
ರೈಲ್ವೆ ಮಂತ್ರಿ ಸುರೇಶ್ ಪ್ರಭು ಅವರ ಚೊಚ್ಚಲ ರೈಲ್ವೆ ಮುಂಗಡಪತ್ರ ಇದಾಗಿದ್ದು, ಪ್ರಯಾಣ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆ ಇದೆ. ಆದರೆ ಟಿಕೆಟ್ ದರದ ಮೇಲೆ ಸ್ವಚ್ಛತಾ ಸೆಸ್ ವಿಧಿಸುವ ಹಾಗೂ ತತ್ಕಾಲ್ ಟಿಕೆಟ್ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಹಿಂದಿನ ಬಜೆಟ್ಗಳಂತೆ ಹೆಚ್ಚು ಹೊಸ ರೈಲುಗಳನ್ನು ಘೋಷಣೆ ಮಾಡುವ ಬದಲು, ಸಾಧ್ಯವಾದಷ್ಟೂ ಕಡಿಮೆ ರೈಲುಗಳನ್ನು ಪ್ರಕಟಿಸುವ ಸಂಭವವಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಹೊಸ ರೈಲ್ವೆ ಯೋಜನೆಗಳನ್ನು ಘೋಷಿಸುವ ಯಾವುದೇ ಸಾಧ್ಯತೆಯೂ ಇಲ್ಲ ಎನ್ನಲಾಗುತ್ತಿದೆ. ಬದಲಿಗೆ ಈಗಾಗಲೇ ಮುಗಿಯುವ ಹಂತ ತಲುಪಿರುವ ಜೋಡಿ ಮಾರ್ಗ, ವಿದ್ಯುದ್ದೀಕರಣ ಯೋಜನೆಗಳನ್ನು ಪೂರ್ಣಗೊಳಿಸಲು ಒತ್ತು ನೀಡಿ, ರಕ್ಷಣಾ ದೃಷ್ಟಿಯಿಂದ ಮಹತ್ವದ್ದಾಗಿರುವ ಹೊಸ ಮಾರ್ಗಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಡೀಸೆಲ್ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ರೈಲ್ವೆ ಇಲಾಖೆಗೆ 12ರಿಂದ 15 ಸಾವಿರ ಕೋಟಿ ರೂ.ವರೆಗೂ ಇಂಧನ ವೆಚ್ಚ ಉಳಿತಾಯವಾಗುತ್ತಿದೆ. ಈ ಲಾಭವನ್ನು ಜನರಿಗೆ ವರ್ಗಾಯಿಸಬಹುದು ಎಂಬ ನಿರೀಕ್ಷೆಯೇನೋ ಇದೆ. ಆದರೆ ವಿದ್ಯುತ್ ವೆಚ್ಚ ಹೆಚ್ಚಳ ಹಾಗೂ ರೈಲ್ವೆ ಹಣಕಾಸು ಸ್ಥಿತಿ ಅನುಕೂಲವಾಗಿಲ್ಲದಿರುವ ಹಿನ್ನೆಲೆಯಲ್ಲಿ ದರ ಕಡಿತದ ಬದಲು, ದರವನ್ನು ಏರಿಕೆ ಕೂಡ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳುವ ಸಂಭವವಿದೆ.
ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ವಿಮಾನಗಳಲ್ಲಿ ಇರುವ ವ್ಯಾಕ್ಯೂಂ ಟಾಯ್ಲೆಟ್ ಅನ್ನು ರೈಲುಗಾಡಿಗಳ 59 ಸಾವಿರ ಬೋಗಿಗಳಲ್ಲಿ ಅಳವಡಿಸುವ ಕುರಿತು ಸುರೇಶ್ ಪ್ರಭು ಪ್ರಕಟಿಸುವ ನಿರೀಕ್ಷೆ ಇದೆ. ಅಲ್ಲದೆ ರೈಲು ನಿಲ್ದಾಣಗಳಲ್ಲಿ ಸ್ವತ್ಛತೆ, ಜೈವಿಕ ಟಾಯ್ಲೆಟ್ಗೆ ಒತ್ತು ನೀಡುವ ಸಂಭವವಿದೆ. ಪ್ರಯಾಣಿಕರಿಂದ ರೈಲು ಸೇವೆ ಬಗ್ಗೆ ಅಭಿಪ್ರಾಯ ಪಡೆಯಲು ವೆಬ್ಸೈಟ್ ಆರಂಭಿಸುವ ಸಾಧ್ಯತೆ ಇದೆ.
ಭದ್ರತಾ ದೃಷ್ಟಿಯಿಂದ ರೈಲು ಬೋಗಿ ಹಾಗೂ ನಿಲ್ದಾಣಗಳಲ್ಲಿ ಸಿಸಿಟೀವಿ ಅಳವಡಿಕೆ, ಜಂಟಿ ಸಹಭಾಗಿತ್ವ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ)ಯೊಂದಿಗೆ ಹೈಸ್ಪೀಡ್ ರೈಲು ಮಾರ್ಗ, ರೈಲ್ವೆಗೆ ಸಂಪನ್ಮೂಲ ಹೊಂದಿಸಲು ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ), ರೈಲು ಬೋಗಿಗಳ ಮೇಲೆ ಹೆಚ್ಚು ಹೆಚ್ಚು ಜಾಹೀರಾತು ಪ್ರಕಟಿಸಲು ಹಾಗೂ ಕಂಪನಿಗಳ ಬ್ರ್ಯಾಂಡ್ ಹೆಸರನ್ನು ರೈಲುಗಳಿಗೆ ಇಡಲು ಅವಕಾಶ ನೀಡುವ ಮೂಲಕ ಅಧಿಕ ಸಂಪನ್ಮೂಲ ಸಂಗ್ರಹಿಸುವ ಕುರಿತು ರೈಲ್ವೆ ಬಜೆಟ್ನಲ್ಲಿ ಘೋಷಣೆಗಳಿರುವ ಸಾಧ್ಯತೆ ಇದೆ.