ನವದೆಹಲಿ : 'ಬಿಹಾರ' ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಆರ್.ಜೆ.ಡಿ ಸಂಸದ ರಾಜೇಶ್ ರಂಜನ್( ಪಪ್ಪು ಯಾದವ್) ತಿರುಗಿಬಿದ್ದಿದ್ದು ನಿತೀಶ್ ಕುಮಾರ್ ಆರ್.ಜೆ.ಡಿ ಹಾಗೂ ಲಾಲೂ ಪ್ರಸಾದ್ ಯಾದವ್ ರಾಜಕೀಯ ಜೀವನವನ್ನು ಹಾಳುಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಿತೀಶ್ ಕುಮಾರ್ ವಿರುದ್ಧ ಆರೋಪ ಮಾಡಿರುವ ಪಪ್ಪು ಯಾದವ್, ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಪದಚ್ಯುತಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಇನ್ನು ಆರ್.ಜೆ.ಡಿ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿರುವ ಪಪ್ಪು ಯಾದವ್, ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ರಾಜೀನಾಮೆ ಪತ್ರವನ್ನು ಆರ್.ಜೆ.ಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರಿಗೆ ನೀಡುತ್ತೇನೆ, ಅದನ್ನು ಲೋಕಸಭೆಯ ಸ್ಪೀಕರ್ ಗೆ ತಲುಪಿಸಬಹುದು ಎಂದು ಪಪ್ಪು ಯಾದವ್ ಬೆದರಿಕೆ ಹಾಕಿದ್ದಾರೆ. ತಮ್ಮ ರಾಜೀನಾಮೆ ಬೆದರಿಕೆ ಹಿಂದೆ ಬಿಜೆಪಿ ಸೇರುವ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಆರ್.ಜೆ.ಡಿ ಲಾಲೂ ಪ್ರಸಾದ್ ರಿಂದ ನಾನು ಸಂಸದನಾಗಿಲ್ಲ, ನನ್ನಂತೆಯೇ ಪಕ್ಷದಿಂದ ಟಿಕೆಟ್ ಪಡೆದವರಲ್ಲಿ ಹಲವರು ಸೋತಿದ್ದಾರೆ. ನಾನು ಗೆದ್ದಿರುವುದು ಸ್ವಂತ ಶಕ್ತಿಯ ಆಧಾರದಲ್ಲಿ ಎಂದು ರಾಜೇಶ್ ರಂಜನ್ ಲಾಲೂ ಪ್ರಸಾದ್ ಯಾದವ್ ಗೆ ಟಾಂಗ್ ನೀಡಿದ್ದಾರೆ.