ನವದೆಹಲಿ : ಎಲ್.ಪಿ.ಜಿ ಸಿಲಿಂಡರ್ ನ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೆ ವರ್ಗಾಯಿಸುವ ಯೋಜನೆ ಬಳಿಕ ಈಗ ರಸಗೊಬ್ಬರ ಸಬ್ಸಿಡಿಯನ್ನೂ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಯೋಜನೆ ಆರಂಭಿಸಲು ಕೇಂದ್ರ ಸರ್ಕಾರ ಪರಿಶೀಲನೆ ಆರಂಭಿಸಿದೆ.
ಲೋಕಸಭೆಯಲ್ಲಿ ರಸಗೊಬ್ಬರ ಸಚಿವ ಅನಂತ್ ಕುಮಾರ್ ಈ ವಿಷಯ ತಿಳಿಸಿದ್ದು, ರಸಗೊಬ್ಬರ ಸಬ್ಸಿಡಿ ನೇರ ವರ್ಗಾವಣೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಪರಿಶೀಲನೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು. ಇದೇ ವೇಳೆ, ದೇಶದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಸಗೊಬ್ಬರ ಪೂರೈಕೆ ಹೊಣೆ ಕೇಂದ್ರ ಸರ್ಕಾರದ್ದಾಗಿದ್ದು, ಸಾಕಷ್ಟು ಗೊಬ್ಬರ ಪೂರೈಸಿದೆ. ಅದರ ವಿತರಣೆ ರಾಜ್ಯ ಸರ್ಕಾರಗಳ ಹೊಣೆಯಾಗಿದೆ. ರಾಜ್ಯದಲ್ಲಿ ವಿತರಣೆ ಸಮಸ್ಯೆಯಾಗಿದ್ದರೆ ಅದು ರಾಜ್ಯ ಸರ್ಕಾರದ ಹೊಣೆಯಾಗಿರುತ್ತದೆ ಎಂದು ಅವರು ತಿಳಿಸಿದರು.