ನವದೆಹಲಿ : ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಸಮಾಜ ಸೇವಕಿ ಮದರ್ ತೆರೇಸಾ ಅವರು ಮತಾಂತರ ಉದ್ದೇಶ ಇರಿಸಿಕೊಂಡು ಬಡವರ ಸೇವೆ ಮಾಡುತ್ತಿದ್ದರು ಎಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ ಭಾಗವತ್ ನೀಡಿದ ಹೇಳಿಕೆ ವಿವಾದದ ರೂಪ ಪಡೆದುಕೊಂಡಿದೆ. ಈ ಹೇಳಿಕೆಯನ್ನು ವಿಪಕ್ಷಗಳು ಮತ್ತು ಕ್ರೈಸ್ತ ಸಂಘಟನೆಗಳು ವಿರೋಧಿಸಿವೆ. ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ವಾಸಸ್ಥಾನವಾಗಿರುವ ವ್ಯಾಟಿಕನ್ ಕೂಡ ಈ ಹೇಳಿಕೆ ಖಂಡಿಸಿದೆ.
ಭಾಗವತ್ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧಿಯಾ, ಇಂಥ ಹೇಳಿಕೆ ನಾಚಿಕೆಗೇಡು. ಇದಕ್ಕೆ ಬರೀ ಖಂಡನೆಯಷ್ಟೇ ಸಾಲದು. ಆರ್.ಎಸ್.ಎಸ್ ನ್ನು ತನ್ನ ಮಾತೃ ಸಂಸ್ಥೆ ಎನ್ನುವ ಬಿಜೆಪಿ ಸರ್ಕಾರ, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ, ಸರ್ಕಾರಕ್ಕೂ, ಆರ್.ಎಸ್.ಎಸ್ ಹೇಳಿಕೆಗೂ ಸಂಬಂಧವಿಲ್ಲ. ಸರ್ಕಾರಕ್ಕೆ ಸಂಬಂಧಪಡದವರು ನೀಡುವ ಹೇಳಿಕೆಯ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಸಂಸದೀಯ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಆದರೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಅವರು ಭಾಗವತ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಖುದ್ದು ತೆರೇಸಾ ಅವರು ತಾವು ಮತಾಂತರ ಕಾರ್ಯದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದನ್ನು ಕಾಂಗ್ರೆಸ್ ನಿಷ್ಠ ನವೀನ್ ಚಾವ್ಲಾ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಪುಸ್ತಕದಲ್ಲಿ ತೆರೇಸಾ ಸಂದರ್ಶನವನ್ನು ಉಲ್ಲೇಖೀಸಲಾಗಿದೆ ಎಂದು ಲೇಖೀ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತೆರೇಸಾ ಅವರ ಚಾರಿಟಿ ಮಿಷನರಿ ಸಂಘಟನೆ ವಕ್ತಾರೆ ಸುನಿತಾ ಕುಮಾರ್, ಭಾಗವತ್ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ತೆರೇಸಾ ಇದ್ದಾಗಲೂ ಮತಾಂತರ ಮಾಡಿರಲಿಲ್ಲ. ಈಗಲೂ ಅವರ ಸಂಘಟನೆಯಿಂದ ಯಾವುದೇ ಈ ರೀತಿಯ ಕೆಲಸ ನಡೆಯುತ್ತಿಲ್ಲ ಎಂದಿದ್ದಾರೆ. ಅನೇಕ ಚರ್ಚ್ಗಳು ಭಾಗವತ್ ಹೇಳಿಕೆಯನ್ನು ಖಂಡಿಸಿವೆ.
ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಫೇಸ್ಬುಕ್ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮದರ್ ತೆರೇಸಾ ಅವರ ಜೀವನಕ್ಕೆ ಕಳಂಕ ಹಚ್ಚುವ ಯತ್ನಗಳು ನನಗೆ ನೋವು ತಂದಿವೆ ಎಂದಿದ್ದಾರೆ.