ನವದೆಹಲಿ : ರಾಜ್ಯದಲ್ಲಿ ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರಗಳನ್ನು ಬಹಿರಂಗಪಡಿಸಬಾರದೆಂದು ಹಿಮಾಚಲ ಪ್ರದೇಶ ಸರ್ಕಾರಕ್ಕೆ ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ವಾಧ್ರ ಮನವಿ ಮಾಡಿದ್ದಾರೆ.
ತಮ್ಮ ಆಸ್ತಿ ಬಗೆಗಿನ ವಿವರಗಳನ್ನು ಬಹಿರಂಗಗೊಳಿಸುವುದರಿಂದ ತಮ್ಮ ಜೀವನಕ್ಕೆ ಅಪಾಯ ಉಂಟಾಗಲಿದೆ ಎಂದು ಪ್ರಿಯಾಂಕ ವಾಧ್ರ ಹೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಪ್ರಿಯಾಂಕ ವಾಧ್ರ ಹೊಂದಿರುವ ಆಸ್ತಿ ಬಗ್ಗೆ ವಿವರ ಕೇಳಿ ಕಳೆದ ವರ್ಷದ ಜುಲೈ ನಲ್ಲಿ ಆರ್.ಟಿ.ಐ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಬೆನ್ನಲ್ಲೇ ಪ್ರಿಯಾಂಕ ವಾಧ್ರ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸದಂತೆ ಮನವಿ ಮಾಡಿದ್ದಾರೆ.
ಪ್ರಿಯಾಂಕ ವಾಧ್ರ ಎಸ್.ಬಿ.ಜಿ ಭದ್ರತೆ ಪಡೆದಿರುವುದರಿಂದ ಆಸ್ತಿ ವಿವರವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಶಿಮ್ಲಾದ ಡೆಪ್ಯುಟಿ ಕಮಿಷನರ್ ಹೇಳಿದ್ದಾರೆ. ಇದಕ್ಕೂ ಮುನ್ನ, ಆಸ್ತಿ ವಿವರ ಬಹಿರಂಗಪಡಿಸುವಂತೆ ಶಿಮ್ಲಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿಮ್ಲಾ ಗ್ರಾಮಾಂತರ ತಹಶೀಲ್ದಾರ್ ಗೆ ಸೂಚನೆ ನೀಡಿತ್ತು.
ಹಿಮಾಚಲ ಪ್ರದೇಶದಲ್ಲಿರುವ ಪ್ರಿಯಾಂಕ ಆಸ್ತಿ ಬಗ್ಗೆ ವಿವರ ನೀಡುವಂತೆ ಭಟ್ಟಾಚಾರ್ಯ ಎಂಬುವವರು ಆರ್.ಟಿ.ಐ ಗೆ ಅರ್ಜಿ ಸಲ್ಲಿಸಿದ್ದರು. ಪ್ರಿಯಾಂಕ ಗಾಂಧಿ ಎಸ್.ಬಿ.ಜಿ ಭದ್ರತೆ ಪಡೆದಿರುವ ಕಾರಣ ಆಸ್ತಿ ಬಗ್ಗೆ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಡೆಪ್ಯುಟಿ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.