ನವದೆಹಲಿ : ಫೆ.26ರಂದು ಸಚಿವ ಸುರೇಶ್ ಪ್ರಭು ಅವರು ಮಂಡಿಸಲಿರುವ ರೈಲ್ವೆ ಬಜೆಟ್, ಕೊನೆಯ ಪೂರ್ಣ ಪ್ರಮಾಣದ ಕೇಂದ್ರ ರೈಲ್ವೆ ಬಜೆಟ್ ಆಗಲಿದೆಯೇ ಎಂಬ ಸುದ್ದಿ ದೆಹಲಿ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಮೂಲಗಳ ಪ್ರಕಾರ, ರೈಲ್ವೆ ಬಜೆಟ್ ನ್ನು ಸಾಮಾನ್ಯ ಬಜೆಟ್ ನೊಳಗೆ ಅಡಕಗೊಳಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ರೈಲ್ವೆ ಬಜೆಟ್ನ್ನು ಸಾಮಾನ್ಯ ಬಜೆಟ್ನೊಳಗೆ ಅಡಕಗೊಳಿಸುವ ಕುರಿತು ಸ್ವತ: ಪ್ರಧಾನಿ ನರೇಂದ್ರ ಮೋದಿಯವರೇ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.
ಕೇಂದ್ರದಲ್ಲಿ ರೈಲ್ವೆಗಿಂತಲೂ ಹೆಚ್ಚು ವ್ಯವಹಾರ ನಡೆಯುವ ಸಚಿವಾಲಯಗಳಿವೆ. ಹೀಗಿರುವಾಗ ರೈಲ್ವೆಗೆ ಮಾತ್ರ ಪ್ರತ್ಯೇಕ ಬಜೆಟ್ ಏಕೆ ಎನ್ನುವುದು ಸರ್ಕಾರದ ಪ್ರಶ್ನೆ. ಈ ಚಿಂತನೆಯ ಫಲವಾಗಿ ಇನ್ನು ಪ್ರತ್ಯೇಕ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸದಿರಲು ಸರ್ಕಾರ ನಿರ್ಧರಿಸಿದರೆ ಪೂರ್ಣಪ್ರಮಾಣದಲ್ಲಿ ಕೊನೆಯ ರೈಲ್ವೆ ಬಜೆಟ್ ಮಂಡಿಸಿದ ಸಚಿವ ಎಂಬ ದಾಖಲೆ ಸುರೇಶ್ ಪ್ರಭು ಹೆಸರಿನಲ್ಲಿರುತ್ತದೆ.
1920ರಲ್ಲಿ ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರ, ರೈಲ್ವೆ ತಜ್ಞ ವಿಲಿಯಂ ಆಕ್ ವರ್ಥ್ ನೇತೃತ್ವದಲ್ಲಿ 10 ಜನರ ಸಮಿತಿ ರಚಿಸಿತ್ತು. ಈ ಸಮಿತಿಯ ಶಿಫಾರಸ್ಸಿನ ಅನ್ವಯ ರೈಲ್ವೆಯ ಹಣಕಾಸು ಲೆಕ್ಕಾಚಾರವನ್ನು ಸಾಮಾನ್ಯ ಬಜೆಟ್ ನಿಂದ ಬೇರೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಅದರಂತೆ 1924ರಲ್ಲಿ ಮೊದಲ ಬಾರಿಗೆ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸಲಾಯಿತು.