ನವದೆಹಲಿ : 'ನೊಬೆಲ್ ಪ್ರಶಸ್ತಿ' ಪುರಸ್ಕೃತ ಅರ್ಥಶಾಸ್ತ್ರಜ್ನ ಅಮಾರ್ತ್ಯ ಸೇನ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾವು ಎರಡನೇ ಅವಧಿಗೆ ನಳಂದಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಮುಂದುವರೆಯಬೇಕಿದ್ದ ಅವಕಾಶವನ್ನು ಕೇಂದ್ರ ಸರ್ಕಾರ ತಪ್ಪಿಸಿದೆ ಎಂದು ಅಮಾರ್ತ್ಯಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪತ್ರ ಬರೆದಿರುವ ಅಮಾರ್ತ್ಯಸೇನ್, ತಮ್ಮನ್ನು ಆಯ್ಕೆ ಮಾಡಿದರೂ ಎರಡನೇ ಅವಧಿಗೆ ಕುಲಪತಿಯಾಗಿ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿರುವ ಅಮಾರ್ತ್ಯ ಸೇನ್, ಶಿಕ್ಷಣ ಸಂಸ್ಥೆಯ ಆಡಳಿತ ಭಾರತ ಸರ್ಕಾರದ ಅಭಿಪ್ರಾಯಕ್ಕೆ ಗುರಿಯಾಗುತ್ತಿದೆ. ಶಿಕ್ಷಣ ಸಂಸ್ಥೆಯ ಮೂಲಕ ಸರ್ಕಾರ ರಾಜಕೀಯ ಲಾಭಪಡೆಯಲು ಮುಂದಾಗಿದೆ ಎಂದು ಅಮಾರ್ತ್ಯ ಸೇನ್ ಆರೋಪಿಸಿದ್ದಾರೆ.
ನಳಂದಾ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯನ್ನು ಪುನಾರಚನೆ ಮಾಡುವ ಸಂಬಂಧ ಕೇಂದ್ರ ಸರ್ಕಾರ ಹಿಂದಿದ್ದ ಆಡಳಿತ ಮಂಡಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಇದು ನಳಂದಾ ವಿಶ್ವವಿದ್ಯಾನಿಲಯದ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅಮಾರ್ತ್ಯ ಸೇನ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ತಮ್ಮನ್ನು ಕುಲಪತಿಯನ್ನಾಗಿ ಮುಂದುವರೆಯಲು ಬಿಡುತ್ತಿಲ್ಲವಾದ ಕಾರಣ ಜುಲೈ ನಿಂದ ತಾವೇ ಸ್ವಯಂ ನಿವೃತ್ತಿ ಘೋಷಿಸುತ್ತಿರುವುದಾಗಿ ಅಮಾರ್ತ್ಯ ಸೇನ್ ಘೋಷಿಸಿದ್ದಾರೆ.
ಅರ್ಥಶಾಸ್ತ್ರಜ್ನರಾಗಿರುವ ಅಮಾರ್ತ್ಯ ಸೇನ್ ಪ್ರಧಾನಿ ನರೇಂದ್ರ ಮೋದಿ ಅವರ ವೈಚಾರಿಕ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗಲೂ ಈ ಕ್ರಮಕ್ಕೆ ಅಮಾರ್ತ್ಯ ಸೇನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.