ಹೈದ್ರಾಬಾದ್ : ಎನ್.ಡಿ.ಎ ಬಣಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿ.ಆರ್.ಎಸ್ (ತೆಲಂಗಾಣ ರಾಷ್ಟ್ರೀಯ ಸಮಿತಿ ) ಸೇರಿಕೊಂಡರೆ, ಬಣದಿಂದ ತಾನು ಹೊರಹೋಗುವುದಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಎಚ್ಚರಿಕೆ ನೀಡಿದೆ.
ಈ ಕುರಿತು ಮಾತನಾಡಿರುವ ಟಿಡಿಪಿ ರಾಜ್ಯಸಭಾ ಸದಸ್ಯ ಸಿಎಂ ರಮೇಶ್, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 1998ರಿಂದ ಬಿಜೆಪಿಯೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಬಿಜೆಪಿ ಹಾಗೂ ಟಿಡಿಪಿ ಒಟ್ಟಿಗೆ ಸೇರಿ ಚುನಾವಣೆ ಎದುರಿಸುತ್ತಿವೆ. ಬಿಜೆಪಿ, ಎರಡು ಕುದುರೆಗಳ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ, ಟಿ.ಆರ್.ಎಸ್ ಜತೆ ಎನ್.ಡಿ.ಎ ಮೈತ್ರಿ ಮಾಡಿಕೊಂಡರೆ ಟಿಡಿಪಿ ಹೊರ ಹೋಗುವ ಸಂಭವವಿದೆ ಎಂದು ತಿಳಿಸಿದ್ದಾರೆ.
ಎನ್.ಡಿ.ಎ ಜತೆ ಟಿ.ಆರ್.ಎಸ್ ಮೈತ್ರಿ ಮಾಡಿಕೊಳ್ಳುವುದನ್ನು ಅಲ್ಲಗೆಳೆದಿರುವ ಬಿಜೆಪಿ, ಇದೊಂದು ಆಧಾರ ರಹಿತ ಹಾಗೂ ಊಹಾತ್ಮಕ ವರದಿಯಾಗಿದೆ. ಅಲ್ಲದೇ ಎನ್.ಡಿ.ಎ ಸಚಿವ ಸಂಪುಟಕ್ಕೆ ಟಿ.ಆರ್.ಎಸ್ ಅನ್ನು ಸೇರ್ಪಡೆ ಮಾಡಿಕೊಳ್ಳುವ ಯಾವುದೇ ಪ್ರಸ್ತಾಪಗಳು ತಮ್ಮ ಮುಂದಿಲ್ಲ ಎಂದು ತೆಲಂಗಾಣ ಬಿಜೆಪಿ ವಕ್ತಾರ ಕೃಷ್ಣ ಸಾಗರ್ ರಾವ್ ಹೇಳಿದ್ದಾರೆ.