ಲಖ್ನೌ : 'ಉತ್ತರ ಪ್ರದೇಶ'ದ ಸಚಿವ ಆಜಂ ಖಾನ್ ವಿರುದ್ಧ ರಾಜ್ಯಪಾಲ ರಾಮ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಆಜಂ ಖಾನ್ ಸಾಂವಿಧಾನಿಕ ಚೌಕಟ್ಟನ್ನು ಉಲ್ಲಂಘಿಸಿ ಸಂವಿಧಾನದ ವಿರುದ್ಧ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಆಜಂ ಖಾನ್ ಉತ್ತರ ಪ್ರದೇಶದಲ್ಲಿ ಸಾಂವಿಧಾನಿಕ ಚೌಕಟ್ಟು ಮೀರುತ್ತಿದ್ದರೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರಂತರವಾಗಿ ಸುದ್ದಿಗೋಷ್ಠಿಯನ್ನು ಕರೆಯುವ ತಮ್ಮ ಕ್ರಮವನ್ನು ರಾಜ್ಯಪಾಲ ರಾಮ್ ನಾಯ್ಕ್ ಸಮರ್ಥಿಸಿಕೊಂಡಿದ್ದು, ತಾವು ಸಾಂವಿಧಾನಿಕ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಸಂವಿಧಾನದ ಚೌಕಟ್ಟನ್ನು ಮೀರದೆ ರಾಜ್ಯಪಾಲರಿಗೆ ನೀಡಿರುವ ಅಧಿಕಾರವನ್ನು ಮಾತ್ರ ಚಲಾಯಿಸಬೇಕೆಂದು ಕೆಲವು ತಿಂಗಳುಗಳ ಹಿಂದೆ ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರ ರಾಜ್ಯಪಾಲ ರಾಮ್ ನಾಯ್ಕ್ ಗೆ ಎಚ್ಚರಿಕೆ ನೀಡಿತ್ತು.
ರಾಜ್ಯಪಾಲರನ್ನು ಸಂಘಪರಿವಾರದ ಕರಸೇವಕ ಎಂದು ಹೇಳಿದ್ದೂ ಅಲ್ಲದೇ, ರಾಮ್ ನಾಯ್ಕ್ ಅವರ ಹೇಳಿಕೆಗಳು ಮುಸ್ಲಿಮರಲ್ಲಿ ಭಯ ಉಂಟುಮಾಡುತ್ತಿದೆ ಎಂದು ಆಜಂ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಪ್ರತಿಕ್ರಿಯಿಸಿದ್ದಾರೆ.