ನವದೆಹಲಿ : ವಿದ್ಯುತ್ ದರವನ್ನು ಶೇ.50ರಷ್ಟು ಇಳಿಸುವ ಕುರಿತು ವರದಿ ನೀಡಿ ಎಂದು ಸೂಚನೆ ನೀಡಿದ ಬೆನ್ನಲ್ಲೇ, ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ, ತನ್ನ ಪ್ರಣಾಳಿಕೆಯಲ್ಲಿನ ಮತ್ತೂಂದು ಭರವಸೆಯನ್ನು ಈಡೇರಿಸಿದೆ.
ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1 ಲಕ್ಷ ಗುತ್ತಿಗೆ ನೌಕರರ ಸೇವೆಯನ್ನು ಮುಂದಿನ ಆದೇಶದವರೆಗೂ ತೆಗೆದು ಹಾಕದಂತೆ ಸಚಿವಾಲಯಗಳಿಗೆ ಆದೇಶ ಹೊರಡಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ವಿವಿಧ ಸಚಿವಾಲಯಗಳು 1 ಲಕ್ಷಕ್ಕೂ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದವು. ಇವರ ಅವಧಿ ಶೀಘ್ರವೇ ಮುಗಿಯುವ ಹಂತಕ್ಕೆ ಬಂದಿತ್ತು. ಹೀಗಾಗಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರು.
ಈ ನಡುವೆ ಭ್ರಷ್ಟಾಚಾರ ಬಯಲಿಗೆಳೆದ ಏಮ್ಸ್ ಮುಖ್ಯ ವಿಚಕ್ಷಣಾಧಿಕಾರಿ ಹುದ್ದೆಯಿಂದ ವಜಾಗೊಂಡಿದ್ದ ಐ ಎಫ್ ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ ಸೇವೆಯನ್ನು ದೆಹಲಿ ಸರ್ಕಾರಕ್ಕೆ ಒದಗಿಸುವಂತೆ ಕೋರಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಹೇಳಿದ್ದಾರೆ.