ಬೆಂಗಳೂರು : 'ದಲಿತ'ರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ವಿಷಯ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ದಲಿತರನ್ನು ಮುಖ್ಯಮಂತ್ರಿ ಮಾಡಲು ದಲಿತ ಸಂಘಟನೆಗಳು ಪಣತೊಟ್ಟಿವೆ. ಈ ಬಗ್ಗೆ ಖಾಸಗಿ ಹೊಟೇಲ್ ನಲ್ಲಿ ದಲಿತ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿರುವ ದಲಿತ ಸಂಘಟನೆ ಮುಖಂಡ ವೆಂಕಟೇಶ್ ಸ್ವಾಮಿ, ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ ಏಕೆ ಅಧಿಕಾರದಲ್ಲಿರಬೇಕು ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ದಲಿತರ ಕೊಡುಗೆ ಅಪಾರವಾಗಿದೆ. ದಲಿತ ನಾಯಕರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಪಟ್ಟಿದ್ದಾರೆ. ಅಂತವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಬೇಕೆಂದು ವೆಂಕಟೇಶ್ ಸ್ವಾಮಿ ಹೇಳಿದ್ದಾರೆ.
ಒಂದು ವೇಳೆ ದಲಿತರಿಗೆ ಸಿ.ಎಂ ಹುದ್ದೆ ನೀಡಲು ಸಾಧ್ಯವಾಗದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದಲ್ಲಿ ಉಳಿಯುವ ಅರ್ಹತೆ ಇಲ್ಲ. ಅಂತಹ ಪಕ್ಷ ಏಕೆ ಆಡಳಿತ ನಡೆಸಬೇಕೆಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ದಲಿತರಿಗೆ ಉನ್ನತ ಹುದ್ದೆ ನೀಡಬೇಕು ಇಲ್ಲದೇ ಇದ್ದಲ್ಲಿ ಆಡಳಿತಪಕ್ಷದಲ್ಲಿರುವ ದಲಿತ ಶಾಸಕರು ರಾಜೀನಾಮೆ ನೀಡಿ ಹೊರಬರಬೇಕು ಎಂದು ಕರೆ ನೀಡಿದ್ದಾರೆ.
ಒಟ್ಟಾರೆ ದಲಿತರಿಗೆ ಸಿ.ಎಂ ಪದವಿ ನೀಡುವುದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ.