ನವದೆಹಲಿ : ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ನೇತೃತ್ವವನ್ನು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವರ್ಗಾಯಿಸುವ ಪ್ರಯತ್ನ ಕಾಂಗ್ರೆಸ್ ನಲ್ಲಿ ಭರದಿಂದ ಸಾಗಿವೆ.
ಈ ನಿಟ್ಟಿನಲ್ಲಿ ಏಪ್ರಿಲ್ನಲ್ಲಿ ನಡೆಯಲಿರುವ ಎಐಸಿಸಿ ಮಹಾಧಿವೇಶನವು ರಾಹುಲ್ ಗಾಂಧಿ ಅವರ ಪಟ್ಟಾಭಿಷೇಕ ಸಮಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಅನಾರೋಗ್ಯ ಪೀಡಿತರಾಗಿರುವ ಸೋನಿಯಾ ಗಾಂಧಿ ಅವರು ಈಗಾಗಲೇ ಒಂದೊಂದೇ ಜವಾಬ್ದಾರಿಗಳನ್ನು ರಾಹುಲ್ ಅವರಿಗೆ ವಹಿಸಿದ್ದಾರೆ. ಶೀಘ್ರದಲ್ಲೇ ಅಧ್ಯಕ್ಷ ಸ್ಥಾನವನ್ನೂ ಪುತ್ರನಿಗೆ ವರ್ಗಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ರಾಹುಲ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡರೆ ಪಕ್ಷದಲ್ಲಿನ ಹಲವಾರು ಯುವ ಮುಖಂಡರನ್ನು ಮುನ್ನಲೆಗೆ ತಂದು ಹೆಚ್ಚಿನ ಹೊಣೆಗಾರಿಕೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಸೋನಿಯಾ ಗಾಂಧಿ ಅವರ ಜತೆ ಇದ್ದ ಹಿರಿಯ ನಾಯಕರಿಗೆ ಸಲಹೆಗಾರ ಹುದ್ದೆ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ.
ಲೋಕಸಭೆ ಚುನಾವಣೆ ಸೋಲಿನ ಬಳಿಕ ದೇಶದ ವಿವಿಧ ರಾಜ್ಯಗಳ ನಾಯಕರ ಜತೆ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿ, ಸೋಲಿನ ಕಾರಣಗಳ ಬಗ್ಗೆ ಪರಾಮರ್ಶೆ ನಡೆಸಿದ್ದರು.
ಏತನ್ಮಧ್ಯೆ, ಸುಧಾರಣೆ ಪರ ಧೋರಣೆ ಯನ್ನು ಕಾಂಗ್ರೆಸ್ ತ್ಯಜಿಸಲಿದ್ದು, ಬಡವರ ಪರ ವಿಷಯಗಳನ್ನು ಎತ್ತಿಕೊಂಡು ಹೋರಾಟ ನಡೆಸಲಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.