ಭೋಪಾಲ್ : ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದಿತ್ತು ಎನ್ನಲಾದ ನೇಮಕಾತಿ ಹಗರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡಾ ಭಾಗಿಯಾಗಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯವನ್ನು, ತನಿಖೆ ನಡೆಸಿದ್ದ ಎಸ್.ಟಿ.ಎಫ್ ಮಾಡಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ ಕಾಂಗ್ರೆಸ್ ನಾಯಕರಾದ ಕಮಲ್ನಾಥ್, ದಿಗ್ವಿಜಯ್ಸಿಂಗ್, ಜೋತಿರಾಧಿತ್ಯ ಸಿಂಧಿಯಾ ಮೊದಲಾದವರು, ನೇಮಕಾತಿ ಹಗರಣದ ಕುರಿತು ತನಿಖೆ ನಡೆಸಿದ್ದ ರಾಜ್ಯ ಸರ್ಕಾರ ನೇಮಿಸಿದ್ದ ವಿಶೇಷ ಕಾರ್ಯಪಡೆಯು ಚೌಹಾಣ್ ಅವರ ಹೆಸರನ್ನು ಎಕ್ಸೆಲ್ ಶೀಟ್ ದಾಖಲೆಯಲ್ಲಿ 48 ಕಡೆ ಕಿತ್ತುಹಾಕಿದೆ ಎಂದು ದೂರಿದೆ. ಅಲ್ಲದೆ ಹಲವು ಕಡೆ ಚೌಹಾಣ್ ಬದಲು ಅಂದಿನ ಮಧ್ಯಪ್ರದೇಶ ಮುಖ್ಯಮಂತ್ರಿ, ಈಗಿನ ಕೇಂದ್ರ ಸಚಿವೆ ಬದಲು ಉಮಾ ಭಾರತಿ ಅವರ ಹೆಸರನ್ನು ಸೇರಿಸುವ ಮೂಲಕ ಸಾಕ್ಷ್ಯವನ್ನು ತಿರುಚುವ ಕೆಲಸ ಮಾಡಿದೆ ಎಂದು ಆರೋಪಿಸಿದೆ.
ಮಧ್ಯಪ್ರದೇಶದಲ್ಲಿ ಶಿಕ್ಷಕ ಹುದ್ದೆಗಳಿಗೆ ನಡೆಸಲಾದ ನೇಮಕಾತಿಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಿತ್ತು. ಕಾರ್ಯಪಡೆಯು, ಹಗರಣದ ಕಿಂಗ್ ಪಿನ್ ಆಗಿದ್ದ ನಿತಿನ್ ಮೊಹಿಂದ್ರನ ಮನೆ ಮೇಲೆ ದಾಳಿ ಕಂಪ್ಯೂಟರ್ ನಲ್ಲಿ ಇಟ್ಟಿದ್ದ ಹಲವು ರಹಸ್ಯ ಮಾಹಿತಿ ವಶಪಡಿಸಿಕೊಂಡಿತ್ತು.
ನಿತಿನ್ ತನ್ನ ಕಂಪ್ಯೂಟರ್ ನ ಎಕ್ಸೆಲ್ ಶೀಟ್ನಲ್ಲಿ, ಶಿಕ್ಷಕರ ನೇಮಕಾತಿಗೆ ಯಾರ್ಯಾರು ಶಿಫಾರಸು ಮಾಡಿದ್ದರು ಎಂಬ ಮಾಹಿತಿ ದಾಖಲಿಸಿ ಇಟ್ಟಿದ್ದ. ಹೀಗೆ ದಾಖಲಿಸಲಾದ ಹೆಸರಿನಲ್ಲಿ ಉದ್ಯಮಿಗಳು, ವೈದ್ಯರು, ರಾಜಕಾರಣಿಗಳ ಹೆಸರು ಸೇರಿತ್ತು. ಜೊತೆಯಲ್ಲಿ ಯಾರ್ಯಾರು ಎಷ್ಟು ಹಣ ಕೊಟ್ಟಿದ್ದಾರೆ ಎಂಬೆಲ್ಲಾ ವಿವರಗಳೂ ಇದ್ದವು.
ತನಿಖೆ ವೇಳೆ ವಶಪಡಿಸಿಕೊಂಡ ಎಕ್ಸೆಲ್ ಶೀಟ್ ಅನ್ನು ಕೋರ್ಟ್ಗೆ ಸಲ್ಲಿಸಲು ಎಸ್.ಟಿ.ಎಫ್ ಸಿದ್ಧತೆ ನಡೆಸಿದೆ. ಆದರೆ ಈ ಎಕ್ಸೆಲ್.ಶೀಟ್ನಲ್ಲಿ ಶಿಫಾರಸು ಮಾಡಿದ ಕಾಲಂನಲ್ಲಿ 48 ಕಡೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಹೆಸರನ್ನು ತೆಗೆದು ಹಾಕಲಾಗಿದೆ. ಈ ಪೈಕಿ 21 ಕಡೆ ಕೇವಲ ’ಸಚಿವರು' ಎಂದು ತಿದ್ದಲಾಗಿದೆ. 18 ಕಡೆ ಮಧ್ಯಪ್ರದೇಶದ ಮಾಜಿ ಸಿಎಂ, ಬಿಜೆಪಿ ನಾಯಕಿ ಉಮಾ ಭಾರತಿ ಅವರ ಹೆಸರನ್ನು ಸೇರಿಸಲಾಗಿದೆ. ಹಲವು ಕಡೆ ಶಿಫಾರಸು ಮಾಡಿದವರ ಜಾಗವನ್ನು ಖಾಲಿ ಬಿಡಲಾಗಿದೆ. ಈ ಮೂಲಕ ಚೌಹಾಣ್ ಅವರನ್ನು ರಕ್ಷಿಸಲು ಎಸ್.ಟಿ.ಎಫ್ ಮುಂದಾಗಿದೆ ಎಂದು ಕಾಂಗ್ರೆಸ್ ದೂರಿದೆ.