BW News Bureau : ಮಹಾಶಿವರಾತ್ರಿ ಆಚರಣೆಗೆ ರಾಜಧಾನಿ ಬೆಂಗಳೂರು ಸಿದ್ಧಗೊಂಡಿದೆ. ನಗರದ ಹಲವು ಭಾಗಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಹೋಮ-ಹವನಗಳನ್ನು ನಡೆಸಲಾಗುತ್ತದೆ.
ಶಿವರಾತ್ರಿ ಅಂಗವಾಗಿ ಈ ವರ್ಷ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವನ ದೇವಾಯಲಯದಲ್ಲಿ ಮಹಾಯಜ್ನ ನಡೆಯಲಿದೆ. ಇದಕ್ಕಾಗಿ ನಿರ್ಮಿಸಲಾಗಿರುವ 6 ಅಡಿ ಎತ್ತರದ ಹೋಮ ಕುಂಡದಲ್ಲಿ 24 ಗಂಟೆಗಳ ಕಾಲ ಯಜ್ನ ನಡೆಯಲಿದೆ.
ಶಿವರಾತ್ರಿ ಅಂಗವಾಗಿ ನವಗ್ರಹ ಪೂಜೆಯೂ ನಡೆಯಲಿದ್ದು ಜಾಗರಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಶೇಷ ಶಬ್ದ ಮತ್ತು ದೃಶ್ಯವನ್ನೊಳಗೊಂಡ ಪ್ರದರ್ಶನ, 'ಶಿವ ಸರಿಗಮ' ಎಂಬ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಫೆ.17ರ ಬೆಳಗ್ಗೆ 6ರಿಂದ ಫೆ. 18ರ ಮುಂಜಾನೆ 4ರವರೆಗೆ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ. ಶ್ರೀನಿವಾಸಪುರದಲ್ಲಿರುವ ಓಂಕಾರ ಆಶ್ರಮದಲ್ಲಿ ಬೆಳಗ್ಗೆ 6ರಿಂದ ಫೆ.18ರ ಬೆಳಗ್ಗೆ 4ರವರೆಗೆ ಪವಿತ್ರ ಜಲಾಭಿಷೇಕ ಮಾಡಲಾಗುತ್ತದೆ.
ಇದೇ ವೇಳೆ ಶಿವರಾತ್ರಿ ಪ್ರಯುಕ್ತ ಹನುಮಂತನಗರದ ಶೇಶ ಮಹಾ ಬಲಿಮುರಿ ಗಣಪತಿ ದೇವಸ್ಥಾನದ ರಾಮಾಂಜನೇಯ ಗುಡ್ಡ ಹಿಂಬಾಗದಲ್ಲಿ ಅಮರನಾಥ ಗುಹೆ ನಿರ್ಮಿಸಲಾಗಿದೆ.