ನವದೆಹಲಿ : ದೇಶದಲ್ಲಿರುವ ಅಲ್ಪಸಂಖ್ಯಾತರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅಮಿತಾಭ್ ಕುಂದು ಮೌಲ್ಯಮಾಪನ ಸಮಿತಿ ವರದಿಗೆ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಅಮಿತಾಭ್ ಕುಂದು ಸಮಿತಿ ದೇಶದಲ್ಲಿರುವ ಅಲ್ಪಸಂಖ್ಯಾತರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಬಗ್ಗೆ 5 ತಿಂಗಳ ಹಿಂದೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ವಿಶ್ಲೇಷಿಸುವ ಬದಲು ಕೇವಲ ಮುಸ್ಲಿಮರ ಸ್ಥಿತಿಗತಿಗಳನ್ನು ವಿಶ್ಲೇಷಣೆ ನಡೆಸಿದೆ, ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಲ್ಲ ಎಂದು ಸಚಿವಾಲಯ ಹೇಳಿದೆ.
ಸಚಿವಾಲಯದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ಪ್ರೊ.ಅಮಿತಾಭ್ ಕುಂದು, ಮುಸ್ಲಿಮರ ಪರಿಸ್ಥಿತಿಯ ಬಗ್ಗೆಯೇ ವರದಿ ನೀಡಿರುವುದು ನಿಜ, ಆದರೆ ಇತರ ಅಲ್ಪಸಂಖ್ಯಾತರ ಬಗ್ಗೆಯೂ ಅದರಲ್ಲಿ ವಿಶ್ಲೇಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
'ಸಾಚಾರ್ ಸಮಿತಿ ನೀಡಿದ್ದ ಸಲಹೆಗಳು ಜಾರಿಗೆ ಬಂದಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ನಮ್ಮ ಕೆಲಸವಾಗಿತ್ತು. ಆ ವರದಿ ಕೇವಲ ಮುಸ್ಲಿಮರ ಬಗ್ಗೆಯೇ ಕೇಂದ್ರಿತವಾಗಿದ್ದರಿಂದ ನಾವು ಸಾಚಾರ್ ಸಮಿತಿಯ ಅಂಶಗಳ ಬಗ್ಗೆ ಮಾತ್ರ ಗಮನ ಹರಿಸಿದ್ದೇವೆ' ಎಂದು ಪ್ರೊ,ಅಮಿತಾಬ್ ಕುಂದು ಸಮರ್ಥನೆ ನೀಡಿದ್ದಾರೆ.
ಸಾಚಾರ್ ಸಮಿತಿ ವರದಿ ನೀಡಿದ ಬಳಿಕ ಯುಪಿಎ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತ ಸಚಿವಾಲಯವನ್ನು ಅಸ್ಥಿತ್ವಕ್ಕೆ ತಂದಿತ್ತು. ಅಲ್ಪಸಂಖ್ಯಾತರ ಏಳಿಗೆಗಾಗಿ ಸಾಚಾರ್ ಸಮಿತಿ ವರದಿ ನೀಡಿದ್ದ ಅಂಶಗಳು ಜಾರಿಯಾಗಿರುವುದರ ಬಗ್ಗೆ ವರದಿ ನೀಡಲು ಅಮಿತಾಭ್ ಕುಂದು ಸಮಿತಿಯನ್ನು ರಚಿಸಲಾಗಿತ್ತು.