ಅಡಿಲೇಡ್ : ವಿಶ್ವಕಪ್ ಸಮರದಲ್ಲಿ ಬದ್ಧ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಗೆ ವೇದಿಕೆ ಸಜ್ಜುಗೊಂಡಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿರುವ ಕ್ರಿಕೆಟ್ ಜಗತ್ತಿನ ಹಣಾಹಣಿ ಆರಂಭಗೊಂಡಿದ್ದು,ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಆರಂಭಿಕ ಆಘಾತದ ಹೊರತಾಗಿಯೂ ತಾಳ್ಮೆಯ ಆಟವಾಡುತ್ತಿದೆ.
ತಂಡ 34 ರನ್ಗಳಿಸಿದ್ದಾಗ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸೊಹೈಲ್ ಖಾನ್ ಎಸೆದ ಚಂಡನ್ನು ಮಿಸ್ಬಾ ಕೈಗೆ ಕ್ಯಾಚ್ ಇತ್ತು ನಿರ್ಗಮಿಸಿದರು.
ಇತ್ತೀಚಿನ ವರದಿ ಬಂದಾಗ 17 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ. ಶಿಖರ್ ಧವನ್ 36 ರನ್ ,ಕೊಹ್ಲಿ 29 ರನ್ಗಳಿಸಿ ತಾಳ್ಮೆಯ ಆಟವಾಡುತ್ತಿದ್ದಾರೆ.
ಭಾರತೀಯ ಬೌಲಿಂಗ್ ಪಾಳಯಕ್ಕೆ ವೇಗಿ ಮೊಹಿತ್ ಶರ್ಮಾ ಪ್ರವೇಶವಾಗಿದೆ. ಉಳಿದಂತೆ ಧವನ್, ರೋಹಿತ್ ಶರ್ಮಾ, ಕೊಹ್ಲಿ, ರಹಾನೆ, ಧೋನಿ, ರೈನಾ ಬ್ಯಾಟಿಂಗ್ ಗೆ ಬಲ ತುಂಬಲಿದ್ದರೆ, ಶಮಿ, ಮೋಹಿತ್ ಶರ್ಮಾ, ಉಮೇಶ್ ಯಾದವ್, ಬೌಲಿಂಗ್ ದಾಳಿಯ ಮುಂಚೂಣಿಯಲ್ಲಿದ್ದಾರೆ. ಜಡೇಜಾ, ಅಶ್ವಿನ್ ಆಲ್ ರೌಂಡರ್ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.
ಎದುರಾಳಿ ಪಾಳಯದಲ್ಲಿ ಸಯೀದ್ ಅಜ್ಮಲ್ ಅನುಪಸ್ಥಿತಿ ಧೋನಿ ಹುಡುಗರಿಗೆ ಸ್ವಲ್ಪ ನಿರಾಳತೆ ತಂದೊಡ್ಡಬಹುದು.
ಒಂದೂವರೆ ತಿಂಗಳ ಹಿಂದೆಯೇ ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದರೂ ಟೀಂ ಇಂಡಿಯಾ ಟೆಸ್ಟ್ ಪಂದ್ಯ ಹೊರತುಪಡಿಸಿ ಏಕದಿನ ಪಂದ್ಯ ಗೆದ್ದಿದ್ದು ಅಫ್ಘಾನಿಸ್ಥಾನದೆದುರು ಮಾತ್ರ ಎಂಬುದಷ್ಟೇ ಚಿಂತೆಯ ವಿಷಯ.
ಆದರೆ, ಇದುವರೆಗಿನ ವಿಶ್ವಕಪ್ ಮುಖಾಮುಖಿಗಳಲ್ಲಿ ಪಾಕಿಸ್ಥಾನದೆದುರು 5-0 ವಿಜಯಗಳ ಅಜೇಯ ದಾಖಲೆ ಹೊಂದಿರುವ ಭಾರತವೂ ಈ ಗೆಲುವಿನ ಸರದಿಯನ್ನು ಅಡಿಲೇಡ್ ನಲ್ಲೂ ಮುಂದುವರಿಸಲಿದೆಯೇ ಎಂಬುದು ಕ್ರಿಕೆಟ್ ಪ್ರೇಮಿಗಳ ಸದ್ಯದ ಕುತೂಹಲವಾಗಿದೆ.