ನವದೆಹಲಿ : ಕಾಂಗ್ರೆಸ್ನಲ್ಲಿರುವ ಶೇ.50ರಷ್ಟು ಹಿರಿಯ ನಾಯಕರು ಒಣಗಿದ ಮರಗಳು ಎಂದು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪುತ್ರ, ಮಾಜಿ ಸಂಸದ ಸಂದೀಪ್ ದೀಕ್ಷಿತ್ ಲೇವಡಿ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದ ಬೆನ್ನಲ್ಲೇ ಪಕ್ಷದಲ್ಲಿ ಅಡಗಿದ್ದ ಭಿನ್ನಾಭಿಪ್ರಾಯ ಸ್ಫೋಟಗೊಳ್ಳಲು ಆರಂಭಿಸಿದೆ. ದೆಹಲಿ ಚುನಾವಣೆಯನ್ನು ನಿರ್ವಹಿಸಿದ ರೀತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹರಿಹಾಯ್ದ ಬೆನ್ನಲ್ಲೇ ಅವರ ಪುತ್ರ, ಸಂದೀಪ್ ದೀಕ್ಷಿತ್ ಕೂಡ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ನಲ್ಲಿರುವ ಶೇ.50ರಷ್ಟು ಹಿರಿಯ ನಾಯಕರು ಒಣಗಿದ ಮರಗಳು. ಎನ್ ಎಸ್ ಯು ಐ ಹಾಗೂ ಯುವ ಕಾಂಗ್ರೆಸ್ನಲ್ಲಿ ಇಂಥವರ ಸಂಖ್ಯೆ ಶೇ.70ರಷ್ಟಿದೆ. ಕಾಂಗ್ರೆಸ್ನ ವಿಐಪಿ ಸಂಸ್ಕೃತಿ ದುರಹಂಕಾರವನ್ನು ಸೃಷ್ಟಿಸುತ್ತಿದೆ. ಕಾಂಗ್ರೆಸ್ಸಿನಲ್ಲಿ ನೈಜ ನಾಯಕರೇ ಇಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಟೀಕಿಸಿದ್ದಾರೆ.
ಜಾತ್ಯತೀತತೆ ವಿಚಾರದಲ್ಲಿ ಬಿಜೆಪಿ ಅಥವಾ ಆರ್ಥಿಕ ವಿಚಾರಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಕಾಂಗ್ರೆಸ್ ನಕಲು ಮಾಡುವುದು ಬೇಡ. ಪ್ರಜಾಪ್ರಭುತ್ವ ಎಂಬುದು ಪಕ್ಷದ ಚುನಾವಣೆಗಳನ್ನು ನಡೆಸುವುದರಿಂದ ಆರಂಭವಾಗುವುದಿಲ್ಲ, ಅಂತ್ಯವೂ ಆಗುವುದಿಲ್ಲ ಎನ್ನುವ ಮೂಲಕ ಆಂತರಿಕ ಚುನಾವಣೆ ನಡೆಸುವ ರಾಹುಲ್ ಗಾಂಧಿ ಯತ್ನಗಳನ್ನೂ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರೇಬಾನ್ ಕನ್ನಡಕ ಧರಿಸಿಕೊಂಡು ಬಡವನನ್ನು ಪತ್ತೆ ಮಾಡಲು ಆಗದು. ಪಕ್ಷದ ವಿಚಾರಗಳ ಬದಲು ಅತ್ಯುತ್ತಮ ನಾಯಕರು, ಆಲೋಚನೆಗಳು, ಜನಪರ ವಿಷಯಗಳನ್ನು ಕಾಂಗ್ರೆಸ್ ಪಕ್ಷ ಮೊದಲು ಗುರುತಿಸಬೇಕು. ಪಕ್ಷಕ್ಕೆ ಹೊಸ ವ್ಯಕ್ತಿಗಳನ್ನು ಕರೆತರಬೇಕು. ಆದರೆ ಅವರು ಎಲೆಕ್ಷನ್ಗಳ ಮೂಲಕ ಬರುವುದಿಲ್ಲ. ಸೆಲೆಕ್ಷನ್ ಆಗಬೇಕು ಎಂದು ಸಲಹೆ ನೀಡಿದ್ದಾರೆ.