ಇಸ್ಲಾಮಾಬಾದ್ : 'ತಾಲೀಬಾನ್' ಉಗ್ರ ಸಂಘಟನೆಯನ್ನು ಹುಟ್ಟುಹಾಕಿ ಬೆಳೆಸಿದ್ದೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.
ಪಾಕಿಸ್ತಾನದ ಡಾನ್ ಪತ್ರಿಕೆ ಪ್ರಕಟಿಸಿರುವ ವರದಿಯ ಪ್ರಕಾರ, 2001ರಲ್ಲಿ ಐ.ಎಸ್.ಐ ಮೂಲಕವೇ ತಾಲೀಬಾನ್ ಹುಟ್ಟಿಕೊಂಡಿದೆ ಎಂದು ಹೇಳಲಾಗಿದೆ. ಅಪ್ಘಾನಿಸ್ತಾನದ ಈ ಹಿಂದಿನ ಅಧ್ಯಕ್ಷರಾಗಿದ್ದ ಹಮೀದ್ ಕರ್ಜಾಯ್ ಅವಧಿಯಲ್ಲಿ ಅಪ್ಘಾನಿಸ್ತಾನದ ಅನೇಕ ಅಧಿಕಾರಿಗಳು ಭಾರತದ ಪರ ಇದ್ದರು, ಈ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಕಾರ್ಯಾಚರಣೆ ನಡೆಸಲು ತಾಲೀಬಾನ್ ನ್ನು ಸೃಷ್ಟಿಸಲಾಯಿತು ಎಂದು ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ಸಂಚು ರೂಪಿಸುತ್ತಿದ್ದ ಭಾರತದ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಒಂದು ಸಂಘಟನೆಯ ಅಗತ್ಯವಿತ್ತು. ಆದ್ದರಿಂದ ಪಾಕಿಸ್ತಾನದ ಗುಪ್ತಚರ ಇಲಾಖೆಯೇ ಆಸಕ್ತಿ ವಹಿಸಿ ತಾಲೀಬಾನ್ ನ್ನು ರೂಪಿಸಿದರು. ಐ.ಎಸ್.ಐ ಪ್ರಮುಖರು ಹಾಗೂ ತಾಲೀಬಾನ್ ಸಂಘಟನೆ ಪ್ರಮುಖರು ಸಂಪರ್ಕದಲ್ಲಿದ್ದದ್ದು ನಿಜ, ಇರಬೇಕು ಕೂಡ ಎಂದು ಪರ್ವೇಜ್ ಮುಷರಫ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಭಾರತದ ವಿರುದ್ಧ ವಾಗ್ದಾಳಿ ನಡೆಸಿರುವ ಮುಷರಫ್, ಭಾರತವನ್ನು ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶ, ಮಾನವ ಹಕ್ಕುಗಳನ್ನು ಹಾಗೂ ಪ್ರಜಾಪ್ರಭುತ್ವದ ಸಂಸ್ಕೃತಿಯ ಪ್ರವರ್ತಕ ಎಂದೆಲ್ಲಾ ಬಣ್ಣಿಸಲಾಗುತ್ತದೆ. ಆದರೆ ಇವೆಲ್ಲವೂ ಸುಳ್ಳು, ಭಾರತದಲ್ಲಿ ಮಾನವ ಹಕ್ಕುಗಳೇ ಇಲ್ಲ. ಭಾರತದಲ್ಲಿ ಅಸ್ಪೃಷ್ಯ ವ್ಯಕ್ತಿಯೊಬ್ಬನ ನೆರಳು ಪಂಡಿತರ ಮೇಲೆ ಬಿದ್ದರೂ ಆತನನ್ನು ಕೊಲ್ಲಲಾಗುತ್ತದೆ. ಅಲ್ಲಿನ ಧರ್ಮವೇ ಮಾನವ ಹಕ್ಕುಗಳ ವಿರೋಧಿ ಧರ್ಮ ಎಂದು ಮುಷರಫ್ ಟೀಕಿಸಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ಸಹ ಭಾರತದ ರಾ ಹಾಗೂ ಪಾಕಿಸ್ತಾನದ ಐ.ಎಸ್.ಐ ಪರಸ್ಪರ ಹೊಡೆದಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಮುಷರಫ್ ಹೇಳಿದ್ದಾರೆ.