ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷವು ಅಭೂತಪೂರ್ವ ಗೆಲುವು ದಾಖಲಿಸಿರುವುದನ್ನು ದೇಶಕ್ಕೆ ದೇಶವೇ ಅಚ್ಚರಿಯಿಂದ ನೋಡುತ್ತಿದ್ದರೆ ಇಲ್ಲೊಬ್ಬ ಹಿಂದೂ ಮಹಾಸಭಾ ಮುಖಂಡ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ ಮುಂಬರುವ ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಬಹಿರಂಗ ಹೇಳಿಕೆ ನೀಡಿ ಅಚ್ಚರಿ ಸೃಷ್ಟಿಸಿದ್ದಾರೆ.
ಈ ರೀತಿಯ ಹೇಳಿಕೆ ನೀಡಿರುವ ವ್ಯಕ್ತಿಯು ತನ್ನನ್ನು ತಾನು ಹಿಂದೂ ಮಹಾಸಭಾದ ನಾಯಕನೆಂದು ಹೇಳಿಕೊಂಡಿದ್ದು ತನ್ನ ಹೆಸರು ಸ್ವಾಮಿ ಓಂ ಜೀ ಎಂದು ಹೇಳಿಕೊಂಡಿದ್ದಾರೆ. 'ನಾವು ಮಹಾತ್ಮಾ ಗಾಂಧಿಯನ್ನು ಕೊಂದಿದ್ದೇವೆ ಹಾಗೆಯೇ ಅರವಿಂದ್ ಕೇಜ್ರಿವಾಲ್ ಅವರನ್ನೂ ಸಹ ಗುಂಡಿಕ್ಕಿ ಕೊಲ್ಲುತ್ತೇವೆ' ಎಂಬ ಸ್ವಾಮಿ ಹೇಳಿಕೆಯುಳ್ಳ ವಿಡಿಯೋ ಇದೀಗ ಆನ್ಲೈನ್ನಲ್ಲಿ ಭಾರೀ ಸುದ್ದಿ ಮಾಡುತ್ತಿದೆ.
ನಾನು ಹಿಂದೂ ಮಹಾಸಭಾಕ್ಕೆ ಸೇರಿದ ವ್ಯಕ್ತಿಯಾಗಿದ್ದೇನೆ, ನಮ್ಮವನೇ ಆಗಿದ್ದ ನಾಥೂರಾಂ ಗೋಡ್ಸೆ ಮಹಾತ್ಮಾ ಗಾಂಧಿಯನ್ನು ಕೊಲೆ ಮಾಡಿದ್ದ, ಅದೇ ರೀತಿಯಲ್ಲಿ ಕೇಜ್ರಿವಾಲ್ ಅವರನ್ನೂ ಸಹ ನಾವು ಬಿಡುವುದಿಲ್ಲ. ಕೇಜ್ರಿವಾಲ್ ಅವರನ್ನು ಓರ್ವ ದೇಶದ್ರೋಹಿ ಹಾಗೂ ವಂಚಕ ಎಂದು ಕರೆದಿರುವ ಸ್ವಾಮಿ ಓಂ ಜೀ ಈ ಹಿಂದೆ ಕಳೆದ ವರ್ಷದ ಜನವರಿ 21ರಂದು ಕೇಜ್ರಿವಾಲ್ ಅವರ ಮನೆಗೆ ನುಗ್ಗಿ ಅವರನ್ನು ಹೊಡೆದಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ನಾವು ಕೇಜ್ರಿವಾಲ್ ಅವರಂತಹ ದೇಶದ್ರೋಹಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ, ಒಂದುವೇಳೆ ಅವರು ನಮ್ಮ ಮಾತು ಕೇಳದೇ ಹೋದಲ್ಲಿ ಅಂತವರನ್ನು ನಾವು ಶೂಟ್ ಮಾಡಿ ಕೊಲ್ಲುತ್ತೇವೆ ಎಂದು ಸ್ವಾಮಿ ವಿವರಿಸಿದ್ದಾರೆ.
ಈ ರೀತಿಯ ವಿಚಿತ್ರ ಬಹಿರಂಗ ಕೊಲೆ ಬೆದರಿಕೆ ಹೇಳಿಕೆನೀಡಿರುವ ಸ್ವಾಮಿ ಓಂ ಜೀ ಬಿ.ಜೆ.ಪಿ. ಪಕ್ಷದ ಸದಸ್ಯ ಮಾತ್ರವಲ್ಲದೆ 'ಓಜಸ್ವೀ' ಎಂಬ ಪಕ್ಷದ ಜಾಗತಿಕ ಅಧ್ಯಕ್ಷನೂ ಆಗಿದ್ದಾರಂತೆ. ಪ್ರಸ್ತುತ ಅಸರಾಂ ಬಾಪು ಹಾಗೂ ನಾರಾಯಣ ಸಾಯಿ ಅವರು ಜೈಲು ಪಾಲಾಗಿರುವುದರಿಂದ ಇದೀಗ ಈ ಪಕ್ಷದ ಹೊಣೆ ನನ್ನ ಹೆಗಲೇರಿದೆ ಎಂದವರು ಮಾಧ್ಯಮದವರ ಎದುರು ಹೇಳಿಕೊಂಡಿದ್ದಾರೆ.
ವಿಶೇಷವೆಂದರೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವಾಮಿ ಓಂ ಜೀ ಪಾಲಿಕಾ ಬಝಾರ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಮತ್ತು ಆಮ್ ಆದ್ಮಿ ಹಾಗೂ ಕಾಂಗ್ರೆಸ್ ಮತಗಳನ್ನು ವಿಭಜಿಸಿ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಬೇಕೆಂಬ ಉದ್ದೇಶದಿಂದ ತಾನು ಸ್ಪರ್ಧಿಸಿದ್ದುದಾಗಿಯೂ ಸ್ವಾಮಿ ಓಂ ಜೀ ಹೇಳಿದ್ದಾರೆ.