ನವದೆಹಲಿ : 'ದೆಹಲಿ'ಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿದೆ.
ಆಮ್ ಆದ್ಮಿ ಪಕ್ಷ ಸಂಗ್ರಹಿಸಿರುವ ದೇಣಿಗೆಗೆ ಸಂಬಂಧಿಸಿದಂತೆ ಹಲವು ವಿವಾದಗಳು ಕೇಳಿಬಂದಿರುವುದರಿಂದ ಆದಾಯ ತೆರಿಗೆ ಇಲಾಖೆ ಪಕ್ಷಕ್ಕೆ ನೋಟೀಸ್ ಜಾರಿ ಮಾಡಿದೆ. ಫೆ.16ರೊಳಗೆ ದೇಣಿಗೆ ಸಂಗ್ರಹದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ನೋಟೀಸ್ ನಲ್ಲಿ ತಿಳಿಸಿದೆ.
ಆಮ್ ಆದ್ಮಿ ಪಕ್ಷದಿಂದ ಹೊರಬಂದಿದ್ದ ಆಮ್ ಆದ್ಮಿ ಸ್ವಯಂ ಸೇವಕರ ಸಂಘ ಎ.ವಿ.ಎ.ಎಂ(ಅವಾಂ) ಸದಸ್ಯರು ಆಮ್ ಆದ್ಮಿ ಪಕ್ಷದ ವಿರುದ್ಧ ಮಧ್ಯರಾತ್ರಿಯಲ್ಲಿ 2 ಕೋಟಿರೂಪಾಯಿ ಹವಾಲ ದೇಣಿಗೆ ಸ್ವೀಕರಿಸಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಐಟಿಯಿಂದ ನೋಟೀಸ್ ಜಾರಿ ಮಾಡಲಾಗಿದೆ.
ತಮ್ಮ ವಿರುದ್ಧ ಕೇಳಿಬಂದಿರುವ ಹವಾಲ ದೇಣಿಗೆ ಆರೋಪವನ್ನು ತಳ್ಳಿಹಾಕಿದ್ದ ಆಮ್ ಆದ್ಮಿ ಪಕ್ಷದ ನಾಯಕರು, ಈ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದರು. ಅಲ್ಲದೇ ದೆಹಲಿ ಚುನಾವಣೆಗೂ ಮುನ್ನ ಈ ಆರೋಪ ಕೇಳಿಬಂದಿದ್ದರಿಂದ ತಮ್ಮ ಪಕ್ಷದ ತೇಜೋವಧೆಗಾಗಿ ರೂಪಿಸಲಾಗಿದ್ದ ಷಡ್ಯಂತ್ರ ಎಂದು ಆಪ್ ಆರೋಪಿಸಿತ್ತು.
ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ ಐಟಿ ನೋಟೀಸ್ ಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.