ಬೆಂಗಳೂರು : ಕೃಷಿ ಭಾಗ್ಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿ ರೈತರಿಗೆ ಮೂರು ಹಂತದಲ್ಲಿ ಹಣ ಬಿಡುಗಡೆ ಮಾಡಲಾಗುವುದೆಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಸದಸ್ಯ ಕವಟಗಿ ಮಠ ಮಹಾಂತೇಶ ಮಲ್ಲಿಕಾರ್ಜುನ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಯಡಿ ಈಗಾಗಲೇ ರೈತರ ಹೆಸರಿನಲ್ಲಿ ಅನುದಾನವನ್ನು ಕಾಯ್ದಿರಿಸಿಕೊಳ್ಳಲಾಗಿದ್ದು, ರೈತರಿಗೆ ಇಲಾಖೆಯ ಮಾರ್ಗಸೂಚಿಯನ್ವಯ ಮೂರು ಹಂತದಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಮಳೆಯನ್ನು ಅವಲಂಬಿಸಿ ವ್ಯವಸಾಯ ಮಾಡುತ್ತಿರುವ ರೈತರಿಗಾಗಿ ಕೃಷಿ ಭಾಗ್ಯ ಯೋಜನೆಯನ್ನು ಹಮ್ಮಿಕೊಂಡಿರುವ ಸರ್ಕಾರವು ಅನುದಾನವನ್ನು ಸಮರ್ಪಕವಾಗಿ ಒದಗಿಸಿದ್ದು ಅನುದಾನದ ಸಮಸ್ಯೆ ಇರುವುದಿಲ್ಲ. ವೈಯಕ್ತಿಕವಾಗಿ ಸವಲತ್ತು ಪಡೆಯುವ ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 90 ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.
ವಿಜ್ಞಾನಿಗಳ ಶಿಫಾರಸ್ಸಿನನ್ವಯ ಏಳು ವಲಯಗಳಿಂದ ಮಳೆ ಆಧಾರಿತ ಪ್ರದೇಶವಾದ 107 ತಾಲ್ಲೂಕುಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಆದಾಗ್ಯೂ ಇದರಿಂದ ಕೈಬಿಟ್ಟು ಹೋಗಿರುವ ತಾಲ್ಲೂಕುಗಳನ್ನು ಮುಂದಿನ ಸಾಲಿಗೆ ಸೇರಿಸಿಕೊಳ್ಳಲಾಗುವುದು. ಹಾಗೆಯೇ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಆಯ್ಕೆಯಾದ ಎಲ್ಲಾ ಅರ್ಹ ಫಲಾನುಭವಿ ರೈತರಿಗೆ ಡೀಸೆಲ್ ಪಂಪ್ಸೆಟ್ ಅನ್ನು ವಿತರಿಸಲಾಗುವುದೆಂದು ಸದಸ್ಯರಿಗೆ ಮಾಹಿತಿ ನೀಡಿದರು.