ಲಖ್ನೌ : 'ದೆಹಲಿ'ಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೊರೆತಿರುವ ಅಭೂತಪೂರ್ವ ಯಶಸ್ಸಿಗೆ ಸಮಾಜವಾದಿ ಪಕ್ಷದ ಮುಖಂಡ ಆಜಮ್ ಖಾನ್ ಸಂತಸ ವ್ಯಕ್ತಪಡಿಸಿದ್ದು, ದೆಹಲಿಯ ತೀರ್ಪು ದೇಶದ ತೀರ್ಪು ಎಂದು ಬಣ್ಣಿಸಿದ್ದಾರೆ.
ದೆಹಲಿ ಎಲ್ಲಾ ರಾಜ್ಯಗಳಿಂದ ಬಂದಿರುವ ಜನರಿಂದ ಆವರಿಸಲ್ಪಟ್ಟಿದ್ದು ಇಡೀ ದೇಶವನ್ನು ಪ್ರತಿನಿಧಿಸುತ್ತಿದೆ. ಧರ್ಮಗಳನ್ನು ಅವಹೇಳನ ಮಾಡುವವರಿಗೆ, ಮಹಿಳೆಯರನ್ನು ಅವಮಾನ ಮಾಡುವವರಿಗೆ ದೆಹಲಿ ಚುನಾವಣೆ ತಕ್ಕ ಪಾಠ ಕಲಿಸಿದೆ ಎಂದು ಆಜಮ್ ಖಾನ್ ಹೇಳಿದ್ದಾರೆ. ಅಲ್ಲದೇ ಈ ಚುನಾವಣೆ, 1947ರಲ್ಲಿ ದೇಶವಿಭಜನೆಯನ್ನು ಸಹಿಸದ ಮುಸ್ಲಿಮರ ನೋವನ್ನು ಹೋಗಲಾಡಿಸಿದೆ ಎಂದೂ ಆಜಮ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
'ನಾವೆಲ್ಲರೂ ಒಂದೇ ಕುಟುಂಬದವರು, ಅರಾಜಕತೆ, ಧಾರ್ಮಿಕ ನೆಲೆಗಟ್ಟಿನಲ್ಲಿ ಪ್ರತ್ಯೇಕವಾದ ಎಂದಿಗೂ ಸಹಿಸಲು ಸಾಧ್ಯವಿಲ್ಲ'. ಈ ಎಲ್ಲಾ ಅಂಶಗಳನ್ನು ದೆಹಲಿ ಜನತೆ ಚುನಾವಣಾ ಫಲಿತಾಂಶದಿಂದ ಸ್ಪಷ್ಟಪಡಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಹೇಳಿದ್ದಾರೆ.