ಕೋಲ್ಕತ್ತಾ : 'ದೆಹಲಿ' ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ವಿಜಯಗಳಿಸಿರುವುದು ದ್ವೇಷ ರಾಜರಾಕರಣದಲ್ಲಿ ತೊಡಗಿದ್ದ ಶಕ್ತಿಗಳಿಗೆ ದೊಡ್ಡ ಹಿನ್ನಡೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ಗೆಲುವು ದೇಶದ ಹಾಲಿ ರಾಜಕೀಯ ರಂಗದಲ್ಲಿ ಹೊಸ ತಿರುವು ನೀಡಿದೆ ಎಂದು ಹೇಳಿದ್ದಾರೆ.
ದ್ವೇಷದ ರಾಜಕಾರಣದಲ್ಲಿ ತೊಡಗಿರುವವರಿಗೆ, ಜನರಲ್ಲಿ ದ್ವೇಷವನ್ನು ಹರಡುತ್ತಿರುವವರಿಗೆ ಬಹು ದೊಡ್ಡ ಸೋಲಾಗಿರುವುದು ಗಮನಾರ್ಹವಾಗಿದೆ ಎಂದು ಮಮತಾ ಬ್ಯಾನರ್ಜಿ ಟ್ವಿಟರ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ ಮತದಾರರು ಹಾಗೂ ಆಮ್ ಆದ್ಮಿ ಕಾರ್ಯಕರ್ತರು ಹಾಗೂ ಅರವಿಂದ ಕೇಜ್ರಿವಾಲರ್ ನ್ನು ಅಭಿನಂದಿಸಿರುವ ಮಮತಾ ಬ್ಯಾನರ್ಜಿ, ದೇಶದ ಹಾಲಿ ರಾಜಕೀಯ ಸನ್ನಿವೇಶದಲ್ಲಿ ಇದೊಂದು ಮಹತ್ತರ ಬದಲಾವಣೆ ತರಬಲ್ಲ ಚುನಾವಣಾ ಫಲಿತಾಂಶವಾಗಿದೆ ಎಂದಿದ್ದಾರೆ.
ಮತದಾನದ ಹಿಂದಿನ ದಿನ ಟ್ವೀಟ್ ಮಾಡಿದ್ದ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಬೇಕೆಂದು ದೆಹಲಿ ಜನತೆಯಲ್ಲಿ ಮನವಿ ಮಾಡಿದ್ದರು.