ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಇದು ದೆಹಲಿ ಜನತೆಯ ಗೆಲುವು, ಈ ಅಭೂತಪೂರ್ವ ಗೆಲುವು ನೀಡಿದ ದೆಹಲಿ ಜನತೆಗೆ ಅಭಿನಂದನೆ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಆಪ್ ಕಚೇರಿಯ ಬಳಿ ವಿಜಯೋತ್ಸವ ಆಚರಿಸುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಇಷ್ಟೊಂಡು ದೊಡ್ಡ ಮಟ್ಟದ ಗೆಲುವನ್ನು ನಿರೀಕ್ಷಿಸಿರಲಿಲ್ಲ. ಇದು ಸತ್ಯಕ್ಕೆ ದೊರಕಿದ ಅಭೂತಪೂರ್ವ ಗೆಲುವು. ಈ ಗೆಲುವಿನಿಂದಾಗಿ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಮತ್ತು ಭಯವೂ ಆಗುತ್ತಿದೆ. ನಿಮ್ಮಲ್ಲಿ ನಾನೊಬ್ಬ ಸಾಮಾನ್ಯನಾಗಿ ಸೇವೆ ಮಾಡುತ್ತೇನೆ'' ಎಂದರು. ಎಂದು ಹೇಳಿದರು.
ನಾನು ಒಬ್ಬ ಸಣ್ಣ ವ್ಯಕ್ತಿ, ಎಲ್ಲರೂ ಸೇರಿ ದೆಹಲಿ ಜನತೆಯ ಸೇವೆ ಮಾಡಬೇಕಿದೆ. ದೆಹಲಿ ಎಲ್ಲರಿಗೂ ಸೇರಿದ್ದು ಎಂದು ಹೇಳಿರುವ ಕೇಜ್ರಿವಾಲ್, ತಾವು ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಬಡವರು, ಶ್ರೀಮಂತರು ಹೆಮ್ಮೆಪಡುವಂತೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಅಹಂಕಾರವೇ ಕಾಂಗ್ರೆಸ್ ,ಬಿಜೆಪಿ ಸೋಲಿಗೆ ಕಾರಣ. ಅಹಂಕಾರ ಪಟ್ಟರೆ ನಮ್ಮ ಸ್ಥಿತಿಯೂ ಅದೇ ಆಗುತ್ತದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ ಹಗಲು ರಾತ್ರಿ ಶ್ರಮಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅವರು ಧನ್ಯವಾದ ಸಲ್ಲಿಸಿದರು. ಕೇಜ್ರಿವಾಲ್ ಅವರಿಗೆ ಪತ್ನಿ ಸುನಿತಾ ಸುನೀತಾ ಅವರು ಸಾಥ್ ನೀಡಿದರು.