ನವದೆಹಲಿ : 'ಗಡಿ ನಿರ್ವಹಣೆ' ಬಗ್ಗೆ ಹೊಸ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಸಾಧ್ಯತೆಗಳ ಬಗ್ಗೆ ಚೀನಾ ಹಾಗೂ ಭಾರತದ ನಡುವೆ ಮಾತುಕತೆ ನಡೆದಿದೆ. ಚೀನಾ ಪ್ರವಾಸದಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಹಾಗೂ ಚೀನಾದ ರಾಜ್ಯ ಕೌನ್ಸಿಲರ್ ಯಾಂಗ್ ಜಿಚಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಗಡಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳ ನಡುವೆ ನಡೆಯಲಿರುವ 18ನೇ ಸುತ್ತಿನ ಮಾತುಕತೆಗೂ ಮುನ್ನ ಗಡಿ ನಿರ್ವಹಣೆ ಬಗ್ಗೆ ಹೊಸ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಪ್ರಸ್ತಾವನೆ ಉಭಯ ದೇಶಗಳ ಮುಂದಿದೆ. ಅಲ್ಲದೇ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಜಿತ್ ದೋವೆಲ್, ಹಾಗೂ ಚೀನಾದ ಪ್ರತಿನಿಧಿ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿರುವ ಮಾತುಕತೆ ಮಹತ್ವ ಪಡೆದುಕೊಂಡಿದೆ.
ಹೊಸ ನೀತಿ ಸಂಹಿತೆ ಜಾರಿಗೊಳಿಸುವ ಬಗ್ಗೆ ಗಂಭೀರವಾಗಿರುವ ಭಾರತ ಸರ್ಕಾರ, 2013ರಲ್ಲಿ ಸಹಿ ಹಾಕಲಾಗಿದ್ದ ಗಡಿ ರಕ್ಷಣಾ ಸಹಕಾರ ಒಪ್ಪಂದದ ಅಂಶಗಳನ್ನು ಈ ಬಾರಿಯ ಒಪ್ಪಂದದಲ್ಲೂ ಸೇರಿಸಲು ವಿರೋಧಿಸಿದೆ. ಭಾರತ ಸರ್ಕಾರ ಮುಂದಿಟ್ಟಿರುವ ಬೇಡಿಕೆಗಳಿಗೆ ಚೀನಾ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು ಗಡಿ ಭಾಗದಲ್ಲಿ ಶಾಂತಿ ಮತ್ತು ಸುರಕ್ಷತೆ ಕಾಪಾಡಲು ಸಹಕರಿಸುವುದಾಗಿ ತಿಳಿಸಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡುತ್ತಿದ್ದು ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿ ವಿವಾದ ಉಂಟಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಪ್ರಥಮ ಬಾರಿಗೆ ಚೀನಾಗೆ ಭೇಟಿ ನೀಡಲಿದ್ದು, ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ.