ನವದೆಹಲಿ : 'ಅಗ್ನಿ-5 ಕ್ಷಿಪಣಿ' ಯೋಜನಾ ನಿರ್ದೇಶಕ ಆರ್.ಕೆ ಗುಪ್ತಾ ಅವರ ವರ್ಗಾವಣೆಯನ್ನು ರಕ್ಷಣಾ ಸಚಿವಾಲಯ ತಡೆಹಿಡಿದಿದೆ.
ಸ್ವತಃ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ಅವರೇ ಆರ್.ಕೆ ಗುಪ್ತಾ ಅವರ ವರ್ಗಾವಣೆಯ ಆದೇಶವನ್ನು ಅಮಾನತ್ತು ಮಾಡುವಂತೆ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಅಗ್ನಿ-5 ಕ್ಷಿಪಣಿ ಯೋಜನೆಯ ನಿರ್ದೇಶಕರಾಗಿದ್ದ ಆರ್.ಕೆ ಗುಪ್ತಾ ಅವರನ್ನು ಡಿ.ಆರ್.ಡಿ.ಒ ಮಾಜಿ ಮುಖ್ಯಸ್ಥ ಅವಿನಾಶ್ ಚಂದರ್ ತಾವು ಅಧಿಕಾರ ಕಳೆದುಕೊಳ್ಳಲಿದ್ದ ಕೆಲವೇ ದಿನಗಳ ಹಿಂದೆ ಏಕಾಏಕಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದರು.
ಯಾವುದೇ ಪೂರ್ವಸೂಚನೆ ಇಲ್ಲದೇ ಏಕಾಏಕಿಯಾಗಿ ವರ್ಗಾವಣೆ ಮಾಡುವ ಮೂಲಕ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಆರ್.ಕೆ ಗುಪ್ತಾ ರಕ್ಷಣಾ ಸಚಿವಾಲಯದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿರುವ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ವರ್ಗಾವಣೆ ಆದೇಶವನ್ನು ಅಮಾನತ್ತುಗೊಳಿಸಿದ್ದಾರೆ.
ಗುಪ್ತಾ ಅವರ ವರ್ಗಾವಣೆಯನ್ನು ಕಳೆದ ಜನವರಿ 31ರಂದು ಯಶಸ್ವಿಯಾಗಿ ನಡೆಸಲಾಗಿದ್ದ ಅಗ್ನಿ 5 ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆಯ ಕೆಲವೇ ದಿನಗಳ ಬಳಿಕ ನಡೆದಿದೆ. ವಿಚಿತ್ರವೆಂದರೆ ಜನವರಿ 9ರ ದಿನಾಂಕ ಹೊಂದಿರುವ ವರ್ಗಾವಣೆ ಆದೇಶ ಪತ್ರವನ್ನು ಗುಪ್ತಾ ಅವರಿಗೆ ಫೆಬ್ರವರಿ 2ರಂದು ತಲುಪಿಸಲಾಗಿದೆ.
ಅತ್ಯುತ್ತಮ ಸೇವಾ ಹಿನ್ನೆಲೆ ಹೊಂದಿರುವ ಹೊರತಾಗಿಯೂ ನನ್ನನ್ನು ಅಗ್ನಿ 5 ಕ್ಷಿಪಣಿ ಕಾರ್ಯಕ್ರಮದ ಪಾಜೆಕ್ಟ್ ನಿರ್ದೇಶಕನ ಸ್ಥಾನದಿಂದ ಬೇರೆಡೆಗೆ ವರ್ಗಾಯಿಸಲಾಗಿರುವುದರಿಂದ ತಮಗೆ ಅತೀವವಾದ ವೇದನೆ ಉಂಟಾಗಿದೆ. ಭಾರವಾದ ಹೃದಯದಿಂದ ನಾನು ಫೆ.2ರಂದು ನನ್ನ ಹೊಣೆಗಾರಿಕೆಯನ್ನು ಬಿಟ್ಟುಕೊಟ್ಟಿದ್ದೇನೆ ಎಂದು ರಕ್ಷಣಾ ಕಾರ್ಯದರ್ಶಿ ಆರ್.ಕೆ ಮಾಥುರ್ ಅವರಿಗೆ ಬರೆದಿರುವ ಪತ್ರದಲ್ಲಿ ಗುಪ್ತಾ ಹೇಳಿದ್ದರು. ಮಾಥುರ್ ಡಿ.ಆರ್.ಡಿ.ಒ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.