BW News Bureau : ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತದ ಕ್ಯಾಥೊಲಿಕ್ ಬಿಷಪ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಬೇಕಿದ್ದ ವ್ಯಾಟಿಕನ್ ಸಿಟಿಯ ಇಬ್ಬರು ಅಧಿಕಾರಿಗಳಿಗೆ ವೀಸಾ ನಿರಾಕರಿಸಲಾಗಿದೆ.
ಬೆಂಗಳೂರಿನಲ್ಲಿ ಫೆ.4ರಿಂದ ನಡೆಯುತ್ತಿರುವ ಭಾರತದ ಕ್ಯಾಥೊಲಿಕ್ ಬಿಷಪ್ ಗಳ 27ನೇ ರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ವ್ಯಾಟಿಕನ್ ಸಿಟಿಯ ಇಬ್ಬರು ಅಧಿಕಾರಿಗಳು ಫೆ.5ರಂದು ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ ಅವರಿಗೆ ವೀಸಾ ನಿರಾಕರಣೆ ಮಾಡಲಾಗಿದೆ ಎಂದು ಕ್ಯಾಥೋಲಿಕ್ ಚರ್ಚ್ ಕ್ಯಾತೆ ತೆಗೆದಿದೆ.
ವ್ಯಾಟಿಕನ್ ಸಿಟಿಯಿಂದ ಆರ್ಚ್ ಬಿಷಪ್ ಆರ್ಥರ್ ರೋಚೆ, ಹಾಗೂ ಪ್ರೋಟಿಯೇಸ್ ರುಗಾಂಬ್ವಾ, ಬೆಂಗಳೂರಿಗೆ ಆಗಮಿಸಬೇಕಿತ್ತು, ಇದಕ್ಕಾಗಿ ಡಿಸೆಂಬರ್ ನಲ್ಲೇ ಅವರು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಇತ್ಯರ್ಥಗೊಳಿಸದ ಅಧಿಕಾರಿಗಳು ಕೊನೆ ಕ್ಷಣದಲ್ಲಿ ತಿರಸ್ಕರಿಸಿದ್ದಾರೆ ಎಂದು ಕ್ಯಾಥೋಲಿಕ್ ಚರ್ಚ್ ಆರೋಪಿಸಿದೆ. ಪರಿಣಾಮ ಒಂದು ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ವ್ಯಾಟಿಕನ್ ಸಿಟಿಯ ಅಧಿಕಾರಿಗಳು ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಆದರೆ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿರುವ ಬೆಂಗಳೂರು ಕ್ಯಾಥೋಲಿಕ್ ಚರ್ಚ್ ವಿಡಿಯೋ ಕಾನ್ಫರೆನ್ಸ್ ಮೂಲಕ ವ್ಯಾಟಿಕನ್ ಸಿಟಿ ಅಧಿಕಾರಿಗಳ ಭಾಷಣ ಕಾರ್ಯಕ್ರಮ ಆಯೋಜಿಸಿದೆ.