ನವದೆಹಲಿ : ಶಾರದಾ ಚಿಟ್ ಪಂಡ್ ಹಗರಣ ಸಂಬಂಧ, ಕೇಂದ್ರದ ಮಾಜಿ ಸಚಿವ ಮಾತಂಗ್ ಸಿನ್ ಅವರನ್ನು ಬಂಧಿಸದಂತೆ ತಡೆಯಲು ಯತ್ನಿಸಿದ್ದ ಗೃಹ ಇಲಾಖೆಯ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರನ್ನು ಹುದ್ದೆಯಿಂದ ವಜಾ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೆಲ ದಿನಗಳ ಹಿಂದಷ್ಟೇ ಸಿಬಿಐ, ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಮಾತಂಗ್ ಸಿನ್ ಅವರನ್ನು ಚಿಟ್ ಪಂಡ್ ಹಗರಣ ಸಂಬಂಧ ವಿಚಾರಣೆ ಗುರಿಪಡಿಸಿತ್ತು. ವಿಚಾರಣೆ ಬಳಿಕ ಸಿಬಿಐ ಅಧಿಕಾರಿಗಳು ಮಾತಂಗ್ ಅವರನ್ನು ಬಂಧಿಸುತ್ತಾರೆ ಎಂಬ ಸುಳಿವು ಸಿಗುತ್ತಲೇ, ಸಿಬಿಐ ಅಧಿಕಾರಿಗಳಿಗೆ ಕರೆ ಮಾಡಿದ್ದ ಗೋಸ್ವಾಮಿ, ಮಾಜಿ ಸಚಿವರನ್ನು ಬಂಧಿಸದಂತೆ ಸೂಚಿಸಿದ್ದರು. ಇದರ ಹೊರತಾಗಿಯೂ ಸಿಬಿಐ ಅಧಿಕಾರಿಗಳು ಮಾತಂಗ್ ಅವರನ್ನು ಬಂಧಿಸಿದ್ದರು.
ಸಿಬಿಐ ಕಾರ್ಯದಲ್ಲಿ ಗೋಸ್ವಾಮಿ ಮಧ್ಯಪ್ರವೇಶಿಸಿದ್ದು ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರೇ ಗೋಸ್ವಾಮಿ ಅವರೊಂದಿಗೆ ಈ ವಿಷಯದ ಕುರಿತು ಮಾಹಿತಿ ಕೋರಿದ್ದರು. ಈ ವೇಳೆ ತಾವು ಸಿಬಿಐ ಅಧಿಕಾರಿಗಳಿಗೆ ಕರೆ ಮಾಡಿದ್ದನ್ನು ಗೋಸ್ವಾಮಿ ಒಪ್ಪಿಕೊಂಡಿದ್ದರು. ಇನ್ನು ಬುಧವಾರ ರಾಜ್ನಾಥ್ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಇಡೀ ಪ್ರಕರಣ ಕುರಿತು ಮಾಹಿತಿ ನೀಡಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಅನಿಲ್ ಗೋಸ್ವಾಮಿ ಅವರನ್ನು ಹುದ್ದೆಯಿಂದ ವಜಾ ಮಾಡಿ ಆದೇಶ ಹೊರಡಿಸಿತು.