ನವದೆಹಲಿ : 'ದೆಹಲಿ' ಜನರ ಪ್ರೀತಿ ವಿಶ್ವಾಸಗಳನ್ನು ಅಭಿವೃದ್ಧಿ ರೂಪದಲ್ಲಿ ಬಡ್ಡಿ ಸಮೇತ ವಾಪಸ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೆ.3ರಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೆಹಲಿಯ ಜನತೆ ಬಿಜೆಪಿಯನ್ನು ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ನನ್ನನ್ನು ನಿಮ್ಮ ಸ್ವಂತದವನನ್ನಾಗಿಸಿಕೊಂಡಿದ್ದೀರ, ಈಗ ನಿಮ್ಮ ಪ್ರೀತಿ ವಿಶ್ವಾಸಗಳನ್ನು ಹಿಂದಿರುಗಿಸಬೇಕಿದೆ. ಅಭಿವೃದ್ಧಿ ರೂಪದಲ್ಲಿ ಅದನ್ನು ವಾಪಸ್ ನೀಡುತ್ತೇನೆ' ಎಂದಿದ್ದಾರೆ.
ಭಾರತದತ್ತ ಯಾರೇ ನೋಡಿದರೂ ಅವರ ಮೊದಲ ದೃಷ್ಟಿ ದೆಹಲಿ ಕಡೆಗೆ ಇರಲಿದೆ. 15 ವರ್ಷಗಳ ನಿರಂತರ ಆಡಳಿತ ನಡೆಸಿದ್ದ ಕಾಂಗ್ರೆಸ್ ದೆಹಲಿಯನ್ನು ಅಭಿವೃದ್ಧಿ ಮಾಡಿಲ್ಲ. ಆಮ್ ಆದ್ಮಿ ಪಕ್ಷ ದೆಹಲಿಯ ಒಂದು ವರ್ಷವನ್ನು ಹಾಳುಮಾಡಿದೆ. 16 ವರ್ಷಗಳ ತಪ್ಪುಗಳನ್ನು ಬಿಜೆಪಿಗೆ ಅಧಿಕಾರ ನೀಡುವ ಮೂಲಕ ಸರಿಪಡಿಸಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಒಂದು ವರ್ಗದ ಜನರನ್ನು ದೇಶದ ಜನತೆ 60 ವರ್ಷಗಳಿಂದ ಸಾಕಿದ್ದರು. ಜನರ ಕೃಪೆಯಿಂದ ಆ ವರ್ಗದ ಜನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಈಗ ಅಧಿಕಾರ ಬದಲಾಗಿರುವುದರಿಂದ ಆ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಹೇಳುವುದನ್ನು ಕೇಳುವುದಕ್ಕೆ ಯಾರೂ ಇಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ ಮೋದಿ, ಕೆಲವರು ತಾವೊಬ್ಬರೇ ಪ್ರಾಮಾಣಿಕರೆಂದು ಹೇಳುತ್ತಿದ್ದರು. ಬೇರೆಯವರ ಸ್ವಿಸ್ ಬ್ಯಾಂಕ್ ಖಾತೆ ಬಗ್ಗೆ ಪಟ್ಟಿ ಮಾಡುತ್ತಿದ್ದ ಅವರಿಗೆ ತಾವು ಸ್ವೀಕರಿಸಿರುವ ದೇಣಿಗೆಯ ಬಗ್ಗೆಯೇ ಮಾಹಿತಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಕಾಳ ರಾತ್ರಿಯಲ್ಲಿ ನಡೆದ ಹವಾಲ ಹಣದ ದೇಣಿಗೆ ಈಗ ಬಯಲಾಗಿದೆ. ಎಲ್ಲರಿಗೂ ಉಪದೇಶ ಮಾಡುತ್ತಿದ್ದವರ ನಿಜಬಣ್ಣ ಬಯಲಾಗಿದೆ ಎಂದು ಮೋದಿ ಲೇವಡಿ ಮಾಡಿದ್ದಾರೆ.