ನವದೆಹಲಿ : ಕೇಂದ್ರ ಸರ್ಕಾರ ಸಿಲಿಂಡರ್ ಖರೀದಿಸಿದವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಸಬ್ಸಿಡಿ ಮೊತ್ತವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಆಗಾಗ್ಗೆ ಪರಿಷ್ಕರಣೆ ಮಾಡುವುದರ ಬದಲಿಗೆ ವರ್ಷವಿಡೀ ನಿಶ್ಚಿತ ಸಬ್ಸಿಡಿ ದರ ನಿಗದಿಗೆ ಚಿಂತನೆ ನಡೆಸಿದೆ.
ಈ ಕುರಿತು ಫೆ.28ರಂದು ಮಂಡನೆಯಾಗಲಿರುವ ಹಣಕಾಸು ಬಜೆಟ್ನಲ್ಲಿ ಅಧಿಕೃತ ಘೋಷಣೆಯಾಗುವ ಸಂಭವವಿದ್ದು, ಏ.1ರಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬರುವ ಎಲ್ಲ ಸಾಧ್ಯತೆಗಳೂ ಇವೆ.
ಈ ಕ್ರಮ ಜಾರಿಗೆ ಬಂದರೆ ಸರ್ಕಾರದ ಬೊಕ್ಕಸಕ್ಕೆ 14 ಸಾವಿರ ಕೋಟಿ ರೂ. ವರೆಗೂ ಉಳಿತಾಯವಾಗಲಿದ್ದರೆ, ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ನಿಶ್ಚಿತ.
ಸದ್ಯ ಸಬ್ಸಿಡಿರಹಿತ ಒಂದು ಅಡುಗೆ ಅನಿಲ ಸಿಲಿಂಡರ್ ಗೆ ಸುಮಾರು 635 ರೂ. ಬೆಲೆ ಇದೆ. ಸಬ್ಸಿಡಿ ಸಿಲಿಂಡರ್ ನ ಬೆಲೆ 425 ರೂಪಾಯಿ. ಮನೆ ಬಾಗಿಲಿಗೆ ಸಿಲಿಂಡರ್ ಬಂದಾಗ ಗ್ರಾಹಕ ಸಬ್ಸಿಡಿ ರಹಿತ ಮೊತ್ತ 635 ರೂ. ಅನ್ನು ಪಾವತಿಸಿ ತೆಗೆದುಕೊಳ್ಳಬೇಕು. ನೇರ ನಗದು ವರ್ಗಾವಣೆ ಯೋಜನೆ "ಪಹಲ್'ನಡಿ 210 ರೂ. ಸಬ್ಸಿಡಿ ಗ್ರಾಹಕರ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ. ಸಿಲಿಂಡರ್ ಬಂದಾಗ ಹೆಚ್ಚು ಹಣ ಕೊಡಬೇಕು ಎಂಬುದನ್ನೊಂದು ಬಿಟ್ಟರೆ, ಕೊಟ್ಟ ಹಣ ವಾಪಸ್ ಬರುವುದರಿಂದ ಗ್ರಾಹಕರಿಗೆ ನಷ್ಟವಾಗುತ್ತಿಲ್ಲ.
ಆದರೆ ಈಗ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವ್ಯವಸ್ಥೆ ಈ ರೀತಿ ಇಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಅನಿಲ ಬೆಲೆ ಏರಿಳಿತವಾಗುತ್ತಲೇ ಇರುತ್ತದೆ. ನಿಶ್ಚಿತ ಸಬ್ಸಿಡಿ ವ್ಯವಸ್ಥೆ ಜಾರಿಗೆ ಬಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರ ಏರಿದಂತೆಲ್ಲಾ ಗ್ರಾಹಕರು ಸಿಲಿಂಡರ್ ಗೆ ಹೆಚ್ಚು ಹಣ ತೆರುತ್ತಲೇ ಇರಬೇಕಾಗುತ್ತದೆ. ಹೇಗೆಂದರೆ, ಸರ್ಕಾರ ಈಗ 210 ರೂ. ಹಣವನ್ನು ಸಬ್ಸಿಡಿ ರೂಪದಲ್ಲಿ ಪಾವತಿಸುತ್ತಿದೆ. ಈಗಿನ ಮೊತ್ತವನ್ನೇ ನಿಶ್ಚಿತ ಸಬ್ಸಿಡಿ ಎಂದು ನಿರ್ಧರಿಸಿಬಿಟ್ಟರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಲಿಂಡರ್ ದರ 700, 800 ಅಥವಾ 1000 ರೂ.ಗೆ ಹೋದರೂ ಗ್ರಾಹಕರ ಖಾತೆಗೆ ಜಮೆಯಾಗುವುದು ಕೇವಲ 210 ರೂ. ಮಾತ್ರ. ಉಳಿಕೆ ಮೊತ್ತವನ್ನು ಗ್ರಾಹಕ ತನ್ನ ಕೈಯಿಂದಲೇ ಪಾವತಿಸಬೇಕಾಗುತ್ತದೆ.
ಪದೇಪದೇ ಸಬ್ಸಿಡಿ ಮೊತ್ತವನ್ನು ಪರಿಷ್ಕರಣೆ ಮಾಡುವುದರಿಂದ ಸಬ್ಸಿಡಿ ಹಣ ವರ್ಗಾವಣೆ ವೇಳೆ ಅನಗತ್ಯ ಗೊಂದಲ ಉಂಟಾಗಲಿದೆ ಎಂಬ ಕಾರಣವನ್ನು ನಿಶ್ಚಿತ ಸಬ್ಸಿಡಿ ನಿಗದಿಗೆ ಸರ್ಕಾರ ನೀಡುತ್ತಿದೆ. ಈ ಕ್ರಮ ಜಾರಿಗೆ ಬಂದರೆ ಸರ್ಕಾರದ ಬೊಕ್ಕಸಕ್ಕೆ 12 ರಿಂದ 14 ಸಾವಿರ ಕೋಟಿ ರೂ.ವರೆಗೂ ಉಳಿತಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನು ಜಾರಿಗೆ ತಂದ ಬಳಿಕ ಸಬ್ಸಿಡಿ ದರದಲ್ಲಿ ಪೂರೈಸಲಾಗುತ್ತಿರುವ 12 ಸಿಲಿಂಡರ್ಗಳನ್ನು ಕಡಿತಗೊಳಿಸುವ ಯಾವುದೇ ಚಿಂತನೆ ಸರ್ಕಾರಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.