ಬೆಂಗಳೂರು : ವಿಧಾನಮಂಡಲದ ಜಂಟಿ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ರಾಜ್ಯಪಾಲ ವಜುಭಾಯಿ ವಾಲಾ ರಾಜ್ಯ ಕಾಂಗ್ರೆಸ್ ಸರ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಎರಡು ವರ್ಷಗಳ ರಾಜ್ಯ ಸರ್ಕಾರದ ಆಡಳಿತ, ಯೋಜನೆಗಳಗಳನ್ನು ಶ್ಲಾಘಿಸಿದರು.
ಎರಡು ವರ್ಷಗಳ ಆಡಳಿತದಲ್ಲಿ ರಾಜ್ಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜನ ಸ್ನೇಹಿ, ಪಾರದರ್ಶಕ ಆಡಳಿತ ನೀಡಲು ಬದ್ಧವಾಗಿದೆ. ಜನರ ಮನೆ ಬಾಗಿಲಿಗೆ ಯೋಜನೆ ಕೊಂಡಯ್ಯಲು ಶ್ರಮವಹಿಸಿದ್ದು, ಸರ್ಕಾರದ ಸಕಾಲ ಯೋಜನೆ ಯಶಸ್ವಿಯಾಗಿದೆ ಎಂದು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಕಾಲ ಅಡಿಯಲ್ಲಿ ೫೦ಕ್ಕೂ ಹೆಚ್ಚು ಸೇವೆಗಳು ಲಭ್ಯ. ಕೃಷಿ ಭಾಗ್ಯ ಯೋಜನೆಯಡಿ ರೈತರು ಕೃಷಿ ಸಲಕರಣೆ ಪಡೆಯಲು ಕಸ್ಟಂ ಹೈರ್ ಕೇಂದ್ರ ತೆರೆಯಲಾಗಿದೆ. ರೇಷ್ಮೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಅಗ್ರಸ್ಥಾನದಲ್ಲಿದೆ. ಕಾಲುಬಾಯಿ ರೋಗಕ್ಕೆ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿದೆ. ವನ್ಯ ಜೀವಿ ರಕ್ಷಣೆ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ರಾಜ್ಯದಲ್ಲಿ ಹುಲಿ, ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಕೆಲ ಅರಣ್ಯ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ವನ್ಯಜೀವಿಧಾಮಗಳನ್ನಾಗಿ ಘೋಷಣೆ ಮಾಡಲಾಗುವುದು ಎಂದರು.
ಸಹಕಾರ ಸಂಘಗಳಲ್ಲಿ ವಿಕಲಚೇತನರು ಭಾಗವಹಿಸಲು ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಆಶಾಕಿರಣ ಯೋಜನೆ, ಅನ್ನಭಾಗ್ಯ ಯೋಜನೆ ಯಶಸ್ವಿಯಾಗಿದೆ. ಸಾವಯವ ಭಾಗ್ಯ ಯೋಜನೆ ಸ್ಥಾಪನೆಯಾಗಿದೆ. ಹಾಲಿಗೆ ಪ್ರೋತ್ಸಾಹಧನ 4 ರೂ ಹೆಚ್ಚಿಸಲಾಗಿದೆ. ಶೇ.16ರಷ್ಟು ಪ್ರೋತ್ಸಾಹಧನ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ವಿದ್ಯುತ್ ಕಡಿತ ಪರಿಸ್ಥಿತಿ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಳ್ಳಾರಿ ಶಾಖೋತ್ಪನ್ನದ 3ನೇ ಘಟಕ ಹಾಗೂ ಯರಮರಸ್ ಕೇಂದ್ರದ 1, 2 ನೇ ಘಟಕಕ್ಕೆ ಪ್ರಸಕ್ತ ಸಾಲಿನಲ್ಲಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
2ಸಾವಿರ ಕೋಟಿ ವೆಚ್ಚದ ಕ್ರಿಯಾ ಯೋಜನೆ ಜಾರಿದ್ದು, ರೈಲ್ವೆ ಯೋಜನೆಗೆ ಉಚಿತ ಭೂಮಿ ಮಂಜೂರಾತಿ ಜತೆಗೆ ಶೇ.5೦ರಷ್ಟು ಯೋಜನಾ ವೆಚ್ಚ ಭರಿಸಲಾಗುತ್ತದೆ. ಗಣಿಗಾರಿಕೆ, ಪರಿಸರ ಸಂರಕ್ಷಣೆ ಹಿನ್ನಲೆಯಲ್ಲಿ ಗಣಿಗಾರಿಕೆ ನಿಯಮ ತಿದ್ದುಪಡಿಮಾಡಲಾಗಿದ್ದು. ಸರ್ಕಾರಿ ನೌಕರರಿಗೆ ಜ್ಯೋತಿ ಸಂಜಿವೀನಿ ಆರೋಗ್ಯ ಯೋಜನೆ ಜಾರಿ ಮಾಡಲಾಗಿದೆ ಎಂದರು.