ಬೆಂಗಳೂರು : ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆ ಪ್ರಹಸನ ತಡರಾತ್ರಿ ಸುಖಾಂತ್ಯವಾಗಿದೆ. ಕೊನೆಗೂ ರಾಜೀನಾಮೆ ವಾಪಸ್ ಪಡೆಯಲು ಜಾರಕಿಹೊಳಿ ಸಮ್ಮತಿ ಸೂಚಿಸಿದ್ದಾರೆ.
ತಮ್ಮ ಆಹ್ವಾನ ಮೇರೆಗೆ ಬೆಂಗಳೂರಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಅವರನ್ನು ಸಚಿವ ಮಹದೇವಪ್ಪ ನಿವಾಸದಲ್ಲಿ ಭೇಟಿಯಾಗಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದರು. ಈ ವೇಳೆ ಸತೀಶ್ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ರಾಜೀನಾಮೆ ವಾಪಸ್ ಪಡೆದು ಸಚಿವ ಸಂಪುಟದಲ್ಲಿ ಮುಂದುವರಿಯುವುದಾಗಿ ಮಾತುಕತೆ ಬಳಿಕ ಸ್ವತಃ ಜಾರಕಿಹೊಳಿ ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಪ್ರತಿಯಾಗಿ ಅವರಿಗೆ ತಕ್ಷಣಕ್ಕೆ ಅಂದರೆ, ವಿಧಾನಮಂಡಲ ಅಧಿವೇಶನದ ನಂತರ ಅಬಕಾರಿ ಖಾತೆ ಜತೆಗೆ ಹೆಚ್ಚುವರಿ ಖಾತೆಯೊಂದು ದೊರೆಯಲಿದೆ.
ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಶಾಸಕರಾದ ಫಿರೋಜ್ ಸೇಠ್, ಅಶೋಕ್ ಪಟ್ಟಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಬೆಳಗಾವಿ ಮುಖಂಡರು ಸೇರಿದ್ದರು. ಸಭೆಯಲ್ಲಿ ಹಠಾತ್ ನಿರ್ಧಾರ ವಾಪಾಸ್ ಪಡೆಯಬೇಕು. ಪಕ್ಷ ಬಲವರ್ಧನೆ ಕಾಲಘಟ್ಟದಲ್ಲಿ ಇಂಥ ಬೆಳವಣಿಗೆ ಸಲ್ಲ' ಎಂದು ಜಾರಕಿಹೊಳಿ ಅವರನ್ನು ಮನವೊಲಿಸಲಾಯಿತು. ಈ ಸಂದರ್ಭದಲ್ಲಿ ಸಿಎಂ ಆಪ್ತರ ವರ್ತನೆ ಬಗ್ಗೆ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು. `ನಾನು ಅಧಿಕಾರಕ್ಕಾಗಿ ಎಂದೂ ಹಾತೊರೆದವನಲ್ಲ. ಸಿಎಂ ಜತೆ ನನಗೆ ಭಾವನಾತ್ಮಕ ಸಂಬಂಧವಿದೆ. ನಾನು ಅವರಿಂದ ಬಯಸುವುದು ಪ್ರೀತಿ ಮತ್ತು ಆತ್ಮೀಯತೆಯನ್ನು ಮಾತ್ರ. ಆದರೆ ಇದಕ್ಕೆ ಕೆಲವರಿಂದ ಅಡ್ಡಿ ಬರುತ್ತಿದೆ. ಹೀಗಾಗಿ ಕಠಿಣ ತೀರ್ಮಾನ ಅನಿವಾರ್ಯವಾಯಿತು ಎಂದು ಜಾರಕಿಹೊಳಿ ತಿಳಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ನಡೆದಿದ್ದ ಸತೀಶ್ ಜಾರಕಿಹೊಳಿ ರಾಜೀನಾಮೆ ಹಾಗೂ ಮನವೊಲಿಕೆ ಪ್ರಹಸ ಅಂತ್ಯವಾದಂತಾಗಿದೆ.