ಬೆಂಗಳೂರು : ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ರಾಹುಲ್ ಗಾಂಧಿ ವಿರುದ್ಧ ಕೇಳಿಬಂದಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ದಿಗ್ವಿಜಯ್ ಸಿಂಗ್, ರಾಜೀನಾಮೆ ಹಿನ್ನೆಲೆಯಲ್ಲಿ ಜಯಂತಿ ನಟರಾಜನ್ ರಾಹುಲ್ ಗಾಂಧಿ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ತಿಳಿಸಿದ್ದಾರೆ. ಪರಿಸರ ಖಾತೆ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜಯಂತಿ ನಟರಾಜನ್ ಅವರಿಗೆ ರಾಹುಲ್ ಗಾಂಧಿ ಅವರ ಕಚೇರಿಯಿಂದ ಯಾವುದೇ ಒತ್ತಡಗಳು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಓರ್ವ ಸಚಿವೆಯಾಗಿ ಸ್ವಂತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಜಯಂತಿ ನಟರಾಜನ್ ಅವರಿಗೆ ನೀಡಲಾಗಿತ್ತು. ಆದರೆ ಅವರು ಆರೋಪಿಸುತ್ತಿರುವಂತೆ ಸಚಿವರುಗಳ ಕೆಲಸಗಳಲ್ಲಿ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅಥವಾ ಉಪಾಧ್ಯಕ್ಷರಾದ ರಾಹುಲ್ ಗಾಂಧಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿದ್ದಾಗ ರಾಹುಲ್ ಗಾಂಧಿ ಕಚೇರಿಯಿಂದ ತಮಗೆ ನಿರ್ದೇಶನ ಬರುತ್ತಿತ್ತು. ಈ ಹಿಂದಿನ ಕಾಂಗ್ರೆಸ್ ಮೌಲ್ಯಗಳು ಪಕ್ಷದಲ್ಲಿ ಉಳಿದಿಲ್ಲ. ಕಳೆದ 11 ತಿಂಗಳಿನಿಂದ ಕಾಂಗ್ರೆಸ್ ನಲ್ಲಿ ಕಿರಿಕಿರಿ ಅನುಭವಿಸಿದ್ದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಜಯಂತಿ ನಟರಾಜನ್ ಹೇಳಿದ್ದರು.