ನವದೆಹಲಿ : 'ರಾಹುಲ್ ಗಾಂಧಿ' ಬಗ್ಗೆ ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಬರೆದಿರುವ ಪತ್ರ ಯುಪಿಎ ಸರ್ಕಾರ ಕೆಲವು ಕಾಂಗ್ರೆಸ್ ನಾಯಕರ ಹಿತಾಸಕ್ತಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರುಣ್ ಜೇಟ್ಲಿ, ಯುಪಿಎ ಸರ್ಕಾರ ಬಂಡವಾಳಶಾಹಿ ನೀತಿಗಳಿಗೆ ಬೆಂಬಲ ನೀಡುತ್ತಿತ್ತು. ಯುಪಿಎ ಸರ್ಕಾರದ ಸ್ಯಾಡಿಸ್ಟಿಕ್ ಎಕಾನಮಿಯನ್ನು ಮಾಜಿ ಕೇಂದ್ರ ಸಚಿವೆ ರಾಹುಲ್ ಗಾಂಧಿ ವಿರುದ್ಧ ಬರೆದ ಪತ್ರ ಬಹಿರಂಗಗೊಳಿಸಿದೆ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ತ್ಯಜಿಸಿರುವ ಜಯಂತಿ ನಟರಾಜನ್, ತಾವು ಸಚಿವೆಯಾಗಿದ್ದ ಸಂದರ್ಭದಲ್ಲಿ ತಾವೇನು ಮಾಡಬೇಕೆಂಬುದರ ಬಗ್ಗೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಕಚೇರಿಯಿಂದ ನಿರ್ದೇಶನ ಬರುತ್ತಿತ್ತು ಹಾಗೂ ತಮ್ಮ ಮೇಲೆ ಒತ್ತಡ ಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ.
ಜಯಂತಿ ನಟರಾಜನ್ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ ಉಂಟಾಗಿದ್ದರೆ, ಬಿಜೆಪಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಲು ಅಸ್ತ್ರ ದೊರೆತಂತಾಗಿದೆ.
ಯುಪಿಎ ಸರ್ಕಾರ ಕಾಂಗ್ರೆಸ್ ನ ಕಲವೇ ನಾಯಕರುಗಳ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿತ್ತು. ಸರ್ಕಾರವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ನಿಯಂತ್ರಿಸುತ್ತಿದ್ದರು. ಅದರ ಪರಿಣಾಮ ದೇಶದ ಆರ್ಥಿಕತೆ ಹದಗೆಟ್ಟಿತ್ತು ಎಂದು ಜೇಟ್ಲಿ ಅರೋಪಿಸಿದ್ದಾರೆ.