ಚೆನ್ನೈ : ಕಾಂಗ್ರೆಸ್ ನ ಹಿರಿಯ ನಾಯಕಿ, ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ಅಲ್ಲದೇ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಚೆನ್ನೈನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುದ್ದಿಗೋಷ್ಠಿ ನಡೆಸುವ ಉದ್ದೇಶ ನನಗಿರಲಿಲ್ಲ. ಆದರೆ ಸೋನಿಯಾ ಗಾಂಧಿಯವರಿಗೆ ನಾನು ಬರೆದ ಪತ್ರದ ಬಗ್ಗೆ ಇಂದು ಪತ್ರಿಕೆಗಳಲ್ಲಿ ವರದಿಯಾಗಿರುವುದರಿಂದ ನಾನು ಪ್ರತಿಕ್ರಿಯೆ ನೀಡಬೇಕಾಯಿತು ಎಂದರು.
ಪಕ್ಷದಲ್ಲಿನ ಆಂತರಿಕ ಕಚ್ಚಾಟ ಹಾಗೂ ವಿದ್ಯಮಾನಗಳಿಂದ ಬೇಸತ್ತು ಕಾಂಗ್ರೆಸ್ ಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ ಅವರು, ಪ್ರಾಥಮಿಕ ಸದಸ್ಯತ್ವ ಸೇರಿ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
ಇಂದು ನನ್ನ ಪಾಲಿನ ಅತ್ಯಂತ ನೋವಿನ ದಿನ. ಇಷ್ಟುದಿನ ಕಾಂಗ್ರೆಸ್ ನಲ್ಲಿ ಸೇವೆಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಇಷ್ಟು ದಿನವೂ ಕಾಂಗ್ರೆಸ್ ಹೇಳಿದಂತೆ ನಾನು ನಡೆದಿದ್ದೇನೆ. 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ.4 ತಲೆಮಾರುಗಳಿಂದ ನಮ್ಮ ಕುಟುಂಬ ಕಾಂಗ್ರೆಸ್ ಜತೆಗಿದೆ. ಆದರೆ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣ ಬದಲಾಗಿದೆ. ಈ ಹಿಂದಿನ ಮೌಲ್ಯ, ಆದರ್ಶಗಳು ಪಕ್ಷದಲ್ಲಿ ಉಳಿದಿಲ್ಲ. ಇದು ಕಾಂಗ್ರೆಸ್ ಗೆ ಮುಖಭಂಗ ಮಾಡುವ ಉದ್ದೇಶವಲ್ಲ ಎಂದು ವಿವರಿಸಿದರು.
ರಾಹುಲ್ ಗಾಂಧಿ ವಿರುದ್ಧ ನಾನು ಮಾಡಿದ ಆರೋಪಗಳು ಸತ್ಯ. ನಾನು ಸಚಿವೆಯಾಗಿದ್ದಾಗ ನನ್ನ ಮೇಲೆ ಒತ್ತಡ ಹಾಕಲಾಗಿತ್ತು. ಬೃಹತ್ ಯೋಜನೆಗಳಲ್ಲಿ ಎನ್ ಜಿಒಗಳ ಪರವಾಗಿ ನನ್ನ ಮೇಲೆ ಒತ್ತಡ ತಂದಿದ್ದರು. ಅದಾನಿ, ವೇದಾಂತ ಸೇರಿದಂತೆ ಹಲವು ಯೋಜನೆಗಳಿಗೆ ಸಹಕಾರ ನೀಡುವಂತೆ, ಪರಿಸರ ಖಾತೆಯಿಂದ ಕ್ಲಿಯರೆನ್ಸ್ ನೀಡುವಂತೆ ಒತ್ತಡ ಹೇರಲಾಗುತ್ತಿತ್ತು. ನಾನು ಏನು ಮಾಡಬೇಕು ಎಂದು ರಾಹುಲ್ ಗಾಂಧಿ ಕಛೇರಿಯಿಂದ ನಿರ್ದೇಶನ ಬರುತ್ತಿತ್ತು. ಪರಿಸರ ಖಾತೆ ನಿಭಾಯಿಸುವಾಗ ಕಿರಿಕಿರಿ ಅನುಭವಿಸಿದ್ದೆ. ಕಳೆದ 11 ತಿಂಗಳಿಂದ ನಾನು ಸಾಕಷ್ಟು ನೊಂದಿದ್ದೇನೆ ಎಂದು ತಮ್ಮ ನೋವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು.