ಕೊಪ್ಪಳ : ಸತೀಶ್ ಜಾರಕಿಹೊಳಿ ಯಾವುದೇ ಷರತ್ತುಗಳನ್ನು ವಿಧಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಸಚಿವ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಜಾರಕಿಹೊಳಿ ಯಾವುದೇ ಷರತ್ತು ಹಾಕಿಲ್ಲ ಎಂದರು.
ಜಾರಕಿಹೊಳಿ ಖಾತೆ ಬದಲಾವಣೆ ಮಾಡುವಂತೆ ಬಹಳ ದಿನಗಳಿಂದ ಮನವಿ ಮಾಡಿದ್ದರು. ಇದೇ ಕಾರಣಕ್ಕಾಗಿ ರಾಜೀನಾಮೆ ನೀಡಿರಬಹುದು. ಆದರೆ ಸಚಿವ ಸಂಪುಟ ವಿಸ್ತರಣೆ ಬಳಿಕವಷ್ಟೆ ಈ ಕುರಿತು ನಿರ್ಧಾರ ಕೈಗೊೞಲಾಗುವುದು. ಜಾರಕಿಹೊಳಿ ಖಾತೆ ಬದಲಾವಣೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಗರಂ ಆದ ಸಿಎಂ, ನನ್ನನ್ನು ಡಿಸಿಎಂ ಮಾಡಿದ್ದು ದೇವೇಗೌಡರರಲ್ಲ. ದೇವೇಗೌಡರು ಸುಳ್ಳು ಹೇಳುತ್ತಿದ್ದಾರೆ. ನನ್ನನ್ನು ಡಿಸಿಎಂ ಮಾಡಿದ್ದು ಜಾತ್ಯಾತೀತ ಜನತಾದಳ ಪಕ್ಷ ಎಂದರು. ಜೆಡಿಎಸ್ ಗೆ ಜಾಗ ನೀಡುವ ವಿಚಾರ ನನಗೆ ಸಂಬಂಧಿದ್ದಲ್ಲ ಎಂದು ತಿಳಿಸಿದರು.