ಬೆಂಗಳೂರು : ಸತೀಶ್ ಜಾರಕಿಹೊಳಿ ರಾಜೀನಾಮೆ ಪ್ರಕರಣ ಸುಖಾಂತ್ಯ ಕಾಣುವ ಲಕ್ಷಣ ಗೋಚರಿಸಿವೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಮನವೊಲಿಕೆ ಯತ್ನ ನಡೆಸಿದ್ದು, ಮಾತುಕತೆಗೆ ಬೆಂಗಳೂರಿಗೆ ಆಗಮಿಸಲು ಸತೀಶ್ ಜಾರಕಿಹೊಳಿ ಸಮ್ಮತಿ ಸೂಚಿಸಿದ್ದಾರೆ.
ಆದರೆ ರಾಜೀನಾಮೆ ಹಿಂಪಡೆಯುವ ಬಗ್ಗೆ ಸ್ಪಷ್ಟ ನಿರ್ಧಾರವಾಗಿಲ್ಲ. ಶುಕ್ರವಾರ ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿ ಅವರೊಂದಿಗೆ ನೇರಾನೇರ ಚರ್ಚೆ ನಡೆಸಿದ ನಂತರ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಜಾರಕಿಹೊಳಿ ಪರವಾಗಿ ಸಂಧಾನ ನಡೆಸಲು ನಿಯೋಗದಲ್ಲಿ ಬೆಳಗಾವಿಯಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲಕ್ಷ್ಮಿ ಹೆಬ್ಟಾಳಕರ ನೇತೃತ್ವದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಶಾಸಕರಾದ ಫಿರೋಜ್ ಶೇಠ, ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಮಾಜಿ ಶಾಸಕ ಶಾಮ ಘಾಟಗೆ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಡರಾತ್ರಿವರೆಗೂ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಾರಕಿಹೊಳಿ ಅಸಮಾಧಾನಕ್ಕೆ ಇರುವ ಕಾರಣಗಳನ್ನು ಅರಿತ ನಂತರ ಸಿದ್ದರಾಮಯ್ಯ ಅವರು ಜಾರಕಿಹೊಳಿ ಅವರೊಂದಿಗೆ ನೇರವಾಗಿ ದೂರವಾಣಿ ಮೂಲಕ ಮಾತುಕತೆ ನಡೆಸಲು ಮುಂದಾದರು.
ಈ ಸಂದರ್ಭದಲ್ಲಿ ಅಸಮಾಧಾನಕ್ಕೆ ಕಾರಣವಾದ ಅಂಶಗಳ ಬಗ್ಗೆ ಮಾತುಕತೆಗಳು ಆರಂಭಗೊಂಡರೂ, ಚರ್ಚೆ ದೀರ್ಘವಾಗಿ ನಡೆಯದೆ ಬೆಂಗಳೂರಿಗೆ ಬರುವಂತೆ ಸಿಎಂ ಸೂಚಿಸಿದ್ದು, ಇದಕ್ಕೆ ಜಾರಕಿಹೊಳಿ ಒಪ್ಪಿದರು ಎನ್ನಲಾಗಿದೆ. ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಶಾಸಕರು ಹಾಗೂ ಸಚಿವರೊಂದಿಗೆ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್ ಸಭೆ ನಡೆಸಲಿದ್ದು, ಆ ಸಭೆಗೆ ನೇರವಾಗಿ ಜಾರಕಿಹೊಳಿ ಆಗಮಿಸುವರು. ಇದಾದ ಬಳಿಕ ಸಿಎಂ ಹಾಗೂ ಜಾರಕಿಹೊಳಿ ಮಾತುಕತೆ ನಡೆಯುವ ಸಾಧ್ಯತೆಯಿದೆ.