ಲಖ್ನೌ : 'ಅಯೋಧ್ಯೆ'ಯಲ್ಲಿ ರಾಮ ಮಂದಿರ ನಿರ್ಮಿಸುವ ಸಂಬಂಧ ವಿಶ್ವಹಿಂದೂ ಪರಿಷತ್ ಸಂಘಟನೆ, ದೇಶಾದ್ಯಂತ ರಾಮ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ.
ಮಾರ್ಚ್ 21ಅಥವಾ 22ರಿಂದ ದೇಶಾದ್ಯಂತ ರಾಮ ಮಹೋತ್ಸವ ಪ್ರಾರಂಭವಾಗಲಿದ್ದು ಏಪ್ರಿಲ್ 1 ವರೆಗೆ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ನ ಮಾಧ್ಯಮ ವಿಭಾಗದ ಮುಖ್ಯಸ್ಥ ಶರದ್ ಶರ್ಮಾ ಹೇಳಿದ್ದಾರೆ. ರಾಮ ಮಹೋತ್ಸವವನ್ನು ದೇಶದ ಪ್ರತಿ ಗ್ರಾಮದಲ್ಲೂ ಆಚರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಮ ಮಹೋತ್ಸವ ಕಾರ್ಯಕ್ರಮ ರಾಮಜನ್ಮಭೂಮಿ ಚಳುವಳಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಶರದ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಎರಡು ಅಡಿ ಉದ್ದದ ರಾಮನ ವಿಗ್ರಹಗಳನ್ನು ಪೂಜಿಸಲಾಗುತ್ತದೆ ಎಂದು ವಿಶ್ವಹಿಂದೂ ಪರಿಷತ್ ತಿಳಿಸಿದೆ. ರಾಮ ಮಂದಿರ ನಿರ್ಮಾಣಕ್ಕೆ ಹಿಂದೂಗಳು ಬೆಂಬಲಿಸುತ್ತಿದ್ದಾರೆ ಆದರೆ ಆ ಚಳುವಳಿ ಮತ್ತಷ್ಟು ಬಲಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ರಾಮ ಮಹೋತ್ಸವವನ್ನು ಪ್ರಾರಂಭಿಸಲಾಗುತ್ತದೆ ಎಂದು ವಿ.ಹೆಚ್.ಪಿ ಹೇಳಿದೆ. ವಿ.ಹೆಚ್.ಪಿ, ರಾಮ ಮಹೋತ್ಸವದ ಮೂಲಕ ದೇಶಾದ್ಯಂತ 1.5 ರಿಂದ 2 ಲಕ್ಷ ಗ್ರಾಮಗಳನ್ನು ತಲುಪುವ ಗುರಿ ಹೊಂದಿದೆ.
ಈ ಕಾರ್ಯಕ್ರಮ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ನಲ್ಲಿ ಪ್ರತಿಯೊಂದು ಗ್ರಾಮವನ್ನು ತಲುಪಲು ಯೋಜನೆ ರೂಪಿಸಿರುವುದಾಗಿ ಶರದ್ ಶರ್ಮಾ ಹೇಳಿದ್ದಾರೆ.